
ಮಹಾಲಿಂಗಪುರ: ‘ವಿದ್ಯಾರ್ಥಿಗಳನ್ನು ಸದೃಢವಾಗಿ ಸಿದ್ಧಗೊಳಿಸಲು ಗ್ರಾಮೀಣ ಭಾಗದಲ್ಲಿ ಕಬಡ್ಡಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕಬಡ್ಡಿ ಆಡುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ವ್ಯಾಯಾಮ ದೊರೆಯುತ್ತದೆ’ ಎಂದು ಚಿಮ್ಮಡದ ವಿರಕ್ತಮಠದ ಪ್ರಭು ಸ್ವಾಮೀಜಿ ಹೇಳಿದರು.
ಚಿಮ್ಮಡ ಗ್ರಾಮದ ಪಿಕೆಪಿಎಸ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಜಮಖಂಡಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಭೂಮಿಕಾ ಪ್ರೌಢಶಾಲೆ ವತಿಯಿಂದ ಶುಕ್ರವಾರ ಹಮ್ಮಿಕೊಂಡ ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ, ಪ್ರೌಢಶಾಲೆಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಕವಿತಾ ಕೊಣ್ಣೂರ ಮಾತನಾಡಿ, ‘ಕಬಡ್ಡಿ ಕ್ರೀಡೆ ಉಳಿಸಿ ಬೆಳೆಸಬೇಕು. ಕಬಡ್ಡಿ ಗ್ರಾಮೀಣ ಕ್ರೀಡೆಯಾಗಿದ್ದು, ದೇಶದ ರಾಷ್ಟ್ರೀಯತೆ ಮತ್ತು ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ. ಕ್ರೀಡಾ ಸ್ಫೂರ್ತಿಯಿಂದ ಪಾಲ್ಗೊಳ್ಳುವುದು ಮುಖ್ಯ’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ, ಮುಖಂಡ ವಿದ್ಯಾಧರ ಸವದಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಂಗಾರೆವ್ವ ಜಾಲಿಕಟ್ಟಿ ಕ್ರೀಡಾ ಧ್ವಜಾರೋಹಣ ಮಾಡಿದರು.
ಜನಾರ್ದನ ಮಹಾರಾಜರು ಯರಗಟ್ಟಿಕರ ಸಾನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪದ್ಮಾವತಿ ಭಜಂತ್ರಿ, ಚನ್ನಪ್ಪ ಬಿಳ್ಳೂರ, ಎಚ್.ಎಸ್.ಮಿರ್ಜಿ, ಮುತ್ತು ಢವಳೇಶ್ವರ, ಆರ್.ಆರ್.ಪಾಟೀಲ, ಶಂಕರ ಬಟಕುರ್ಕಿ, ಪ್ರಭು ಪಾಲಬಾವಿ, ಬೀರಪ್ಪ ಹಳೆಮನಿ, ಮಹಾಲಿಂಗ ಮಾಯನ್ನವರ, ಬಸವರಾಜ ಕುಂಚನೂರ, ಪ್ರಭು ಗೋವಿಂದಗೋಳ, ರಾಜು ಬಗನಾಳ, ದಾಕ್ಷಾಯಿಣಿ ಮಂಡಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.