
ಮಹಾಲಿಂಗಪುರದಿಂದ ಶ್ರೀಶೈಲಕ್ಕೆ ಕಂಬಿ ಮಲ್ಲಯ್ಯನ ಹೊತ್ತ ಭಕ್ತರು ಪಾದಯಾತ್ರೆ ನಡೆಸಿದರು
ಮಹಾಲಿಂಗಪುರ: ಪಟ್ಟಣದ ಮಹಾಲಿಂಗೇಶ್ವರ ದೇವಸ್ಥಾನದಿಂದ ಶ್ರೀಶೈಲದವರೆಗೆ ನಡೆಯುವ ಮಲ್ಲಯ್ಯನ ಕಂಬಿ ಹೊತ್ತ ಭಕ್ತರ ಪಾದಯಾತ್ರೆ ಮಂಗಳವಾರ ಆರಂಭವಾಯಿತು.
ರನ್ನಬೆಳಗಲಿ ರಸ್ತೆಯ ಮಹಾದ್ವಾರದ ಬಳಿ ಮಲ್ಲಯ್ಯನ ಕಂಬಿಗೆ ಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು.
ಅಲ್ಲಿಂದ ಅವರೊಂದಿಗೆ ಸಾವಿರಾರು ಭಕ್ತರು ಅಂದಾಜು 5 ಕಿ.ಮೀ. ದೂರದ ರನ್ನಬೆಳಗಲಿ ಪಟ್ಟಣದವರೆಗೆ ಪಾದಯಾತ್ರೆ ಮೂಲಕ ತೆರಳಿ ಕಂಬಿಯನ್ನು ಬೀಳ್ಕೊಟ್ಟರು. ರನ್ನಬೆಳಗಲಿಯ ಮಹಾಲಿಂಗೇಶ್ವರ ಮತ್ತು ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಮಹಾದಾಸೋಹ ಆಯೋಜಿಸಲಾಗಿತ್ತು. ರನ್ನಬೆಳಗಲಿಯಿಂದ ಮರಳಿ ಮಹಾಲಿಂಗಪುರಕ್ಕೆ ಬರುವ ಭಕ್ತರಿಗೆ ಉಚಿತವಾಗಿ ವಾಹನದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕಂಬಿಯೊಂದಿಗೆ ಗೋವು ಕೂಡ ತೆರಳುತ್ತಿದ್ದು, ಮಹಿಳೆಯರು, ವೃದ್ಧರು, ಯುವಕರು ಸೇರಿದಂತೆ ಸಾವಿರಕ್ಕೂ ಹೆಚ್ಚು ಪಾದಯಾತ್ರಿಗಳು ಮುಧೋಳ ಮಾರ್ಗವಾಗಿ ಪಾದಯಾತ್ರೆ ಬೆಳೆಸಿದರು. ಅಮಾವಾಸ್ಯೆಯ ಮುನ್ನಾದಿನ ಶ್ರೀಶೈಲ ತಲುಪಲಿದ್ದಾರೆ. ಮಲ್ಲಿಕಾರ್ಜುನ ದರ್ಶನ ಪಡೆದು ಯುಗಾದಿ ಪಾಡ್ಯದ ಮರುದಿನ ಪಾದಯಾತ್ರೆ ಮೂಲಕ ಮಹಾಲಿಂಗಪುರಕ್ಕೆ ಮರಳುವರು.
ಶುಭ ಕಾರ್ಯಗಳಿಲ್ಲ: ಕಂಬಿ ಮಲ್ಲಯ್ಯ ಶ್ರೀಶೈಲಕ್ಕೆ ತೆರಳಿದ ನಂತರ ಪಟ್ಟಣದ ಜನತೆ ಯಾವುದೇ ಶುಭ ಕಾರ್ಯಗಳನ್ನು ಮಾಡುವಂತಿಲ್ಲ. ಇದು ಮೊದಲಿನಿಂದಲೂ ನಡೆದುಕೊಂಡ ಬಂದ ಪದ್ಧತಿ. ಈ ವೇಳೆ ಮದುವೆ, ಸೀಮಂತ, ಗೃಹಪ್ರವೇಶ, ಹೊಸ ಕಟ್ಟಡ ನಿರ್ಮಾಣ ಸೇರಿದಂತೆ ಯಾವುದೇ ಶುಭಕಾರ್ಯಗಳಿಗೆ ನಿರ್ಬಂಧ ಇರುತ್ತದೆ. ಕಸಬರಗಿ, ಹೊಸ ಪಾದರಕ್ಷೆಗಳನ್ನು ಖರೀದಿಸುವಂತಿಲ್ಲ. ಕಂಬಿ ಪಾದಯಾತ್ರೆ ಹೊರಡುವ ದಿನ ಮಹಾಲಿಂಗಪುರದಲ್ಲಿ ಇದ್ದವರು ಕಂಬಿ ಬಂದ ನಂತರ ಜರುಗುವ ಐದೇಶಿ ಉತ್ಸವಕ್ಕೆ ಕಡ್ಡಾಯವಾಗಿ ಭಾಗವಹಿಸಬೇಕು ಎಂಬುದು ಇಲ್ಲಿನ ವಾಡಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.