ಮಹಾಲಿಂಗಪುರ: ‘ಪಟ್ಟಣದ ಕನಕದಾಸ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ₹56.10 ಲಕ್ಷ ನಿವ್ವಳ ಲಾಭ ಗಳಿಸಿದೆ’ ಎಂದು ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಜಕ್ಕನ್ನವರ ಹೇಳಿದರು.
ಸಂಘದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 23ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಸಂಘದಲ್ಲಿ 2,259 ಜನ ಸದಸ್ಯರಿದ್ದಾರೆ. ₹128.34 ಲಕ್ಷ ಶೇರು ಬಂಡವಾಳ ಹೊಂದಿದೆ. ಸದಸ್ಯರಿಗೆ ₹2202.97 ಲಕ್ಷ ವಿವಿಧ ರೀತಿಯ ಸಾಲಗಳನ್ನು ವಿತರಿಸಲಾಗಿದೆ. ₹1775.63 ಲಕ್ಷ ಠೇವು ಹೊಂದಿದೆ. ₹174.02 ಲಕ್ಷ ನಿಧಿ ಬಂಡವಾಳ ಹೊಂದಿದೆ. ಸದಸ್ಯರ ಹಿತದೃಷ್ಟಿಯಿಂದ ಆರ್ಟಿಜಿಎಸ್, ಎನ್ಇಎಫ್ಟಿ ಹಾಗೂ ಸಂಘವು ಸ್ವಂತ ಐಎಫ್ಎಸ್ಸಿ ಕೋಡ್ ಸೌಲಭ್ಯ ಹೊಂದಿದೆ’ ಎಂದರು.
ಕನಕದಾಸ ಹಾಗೂ ಸಹಕಾರ ಪಿತಾಮಹ ಸಿದ್ದನಗೌಡ ಪಾಟೀಲರ ಚಿತ್ರಕ್ಕೆ ಪೂಜೆ ಸಲ್ಲಿಸಿ ಸಭೆಗೆ ಚಾಲನೆ ನೀಡಲಾಯಿತು. ಎಸ್ಎಸ್ಎಲ್ಸಿ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಿರೂರಿನ ಚಿನ್ಮಯಾನಂದ ಸ್ವಾಮೀಜಿ, ಜೋಕಾನಟ್ಟಿಯ ಬಿಳಿಯಾನೆ ಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಚಂದ್ರಶೇಖರ ಮೋರೆ, ರಂಗನಗೌಡ ಪಾಟೀಲ, ಲಕ್ಷ್ಮಣ ಕಿಶೋರ ಮಾತನಾಡಿದರು. ಉಪಾಧ್ಯಕ್ಷ ಶ್ರೀಶೈಲ ಕಳ್ಯಾಗೋಳ, ನಿರ್ದೇಶಕರಾದ ಮಲ್ಲಪ್ಪ ಮಳಲಿ, ವಿಠ್ಠಲ ಬನಾಜ, ಗಣಪತಿ ಮಡ್ಡೆನ್ನವರ, ಮೌನೇಶ ಬಡಿಗೇರ, ರೇಣುಕಾ ಹಾದಿಮನಿ, ಮುಖಂಡರಾದ ಗಿರೀಶ ತಿಮ್ಮಾಪುರ, ಮಹಾಲಿಂಗಪ್ಪ ಲೋಕುರಿ, ಚೇತನ ಹಾದಿಮನಿ, ಮುಖ್ಯ ಕಾರ್ಯನಿರ್ವಾಹಕ ಪ್ರಭು ಹುಬ್ಬಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.