ADVERTISEMENT

ಸಂಸ್ಕಾರವಂತರಿಗೆ ಸೋಲಿಲ್ಲ: ಸುನಂದಾ ಶಿರೂರ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 6:20 IST
Last Updated 3 ಫೆಬ್ರುವರಿ 2026, 6:20 IST
ಜಮಖಂಡಿಯಲ್ಲಿ ನಡೆದ ಕೊಕ್ಕನವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ, ಪ್ರಶಸ್ತಿ ಪ್ರದಾನ, ಕೃತಿ ಲೋಕಾರ್ಪಣೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು
ಜಮಖಂಡಿಯಲ್ಲಿ ನಡೆದ ಕೊಕ್ಕನವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ, ಪ್ರಶಸ್ತಿ ಪ್ರದಾನ, ಕೃತಿ ಲೋಕಾರ್ಪಣೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು   

ಜಮಖಂಡಿ: ಸಾಹಿತ್ಯ ಸಮಾಜದ ಕೈಗನ್ನಡಿ. ಸಂಸ್ಕೃತಿ ನಾಡಿನ ಭವಿಷ್ಯದ ಮುನ್ನುಡಿ. ಸಂಸ್ಕಾರವಂತರಿಗೆೆ ಸೋಲೆ ಇಲ್ಲ. ಸಾಂಸ್ಕೃತಿಕ ಪರಿಜ್ಞಾನ ಮತ್ತು ಜ್ಞಾನ ದಾಸೋಹದಿಂದ ಸಮಾಜ ಕಲ್ಯಾಣ ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯೆ ಸುನಂದಾ ಶಿರೂರ ಹೇಳಿದರು.

ಇಲ್ಲಿನ ಕೆಇಬಿ ಸಭಾಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ‘ಕೊಕ್ಕನವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ’, ಪ್ರಶಸ್ತಿ ಪ್ರದಾನ ಹಾಗೂ ವೈ.ವೈ. ಕೊಕ್ಕನವರ ವಿರಚಿತ ‘ಜಗವೆಲ್ಲ ನಗುತಿರಲಿ’ ಕೃತಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರೊ.ಬಸವರಾಜ ಕಡ್ಡಿ ಮಾತನಾಡಿ, ಬಸವಣ್ಣನವರ ತತ್ವಗಳನ್ನು ಹೇಳುವವರು ಬಹಳ. ಆದರೆ, ಬಸವಣ್ಣನವರ ತತ್ವಗಳನ್ನು ಪಾಲಿಸುವವರು ಬಹಳ ವಿರಳ ಎಂದರು.

ADVERTISEMENT

ಅಥಣಿ ಮೋಟಗಿ ಮಠದ ಪ್ರಭುಚೆನ್ನಬಸವ ಸ್ವಾಮೀಜಿ ಮಾತನಾಡಿ, ಡಾ.ಫ.ಗು.ಹಳಕಟ್ಟಿ, ತಮ್ಮಣ್ಣಪ್ಪ ಚಿಕ್ಕೋಡಿ, ಈಶ್ವರ ಸಣಕಲ್ಲ, ದು.ನಿಂ.ಬೆಳಗಲಿ ಅಂತವರಿಗೆ ಜನ್ಮ ನೀಡಿರುವ ಪವಿತ್ರ ನೆಲದ ಸಂಸ್ಕೃತಿಯನ್ನು ಕೊಕ್ಕನವರ ಅಕಾಡೆಮಿ ಉಳಿಸಿ ಬೆಳೆಸಲಿ ಎಂದು ಆಶೀರ್ವಚನ ನೀಡಿದರು.

ವಿವಿಧ ಕ್ಷೇತ್ರಗಳ ಸಾಧಕರಾದ ಗುರುನಾಥ ಸುತಾರ, ಮಲ್ಲಿಕಾರ್ಜುನ ಹುಲಗಬಾಳಿ(ಸಾಹಿತ್ಯ ನಕ್ಷತ್ರ) ಮಲ್ಲಿಕಾರ್ಜುನ ಇಂಡಿ, ಬಸವರಾಜ ಯಡಹಳ್ಳಿ(ಶಿಕ್ಷಣ ನಕ್ಷತ್ರ) ಸಂಗಮೇಶ ಮಟೋಳಿ, ಮಹಾದೇವ ಕವಿಶೆಟ್ಟಿ(ಕಲಾ ನಕ್ಷತ್ರ) ಪ್ರಭು ಕಾಖಂಡಕಿ, ಪ್ರಶಾಂತ ಪಾಟೀಲ(ಕೃಷಿ ನಕ್ಷತ್ರ) ತಾತಾಸಾಹೇಬ ಬಾಂಗಿ ಎಸ್.ಎಂ.ದಾಶ್ಯಾಳ(ಸೇವಾ ನಕ್ಷತ್ರ) ಅವರಿಗೆ ‘ಕೊಕ್ಕನವರ ನಕ್ಷತ್ರ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ವೈ.ವೈ. ಕೊಕ್ಕನವರ ವಿರಚಿತ ‘ಜಗವೆಲ್ಲ ನಗುತಿರಲಿ’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ನಿವೃತ್ತ ಪ್ರಾಚಾರ್ಯ ವಿ.ಎಸ್. ಮಾಳಿ ಕೃತಿ ಪರಿಚಯಿಸಿದರು.

ಸಾಹಿತಿ ಮಲ್ಲಿಕಾರ್ಜುನ ಇಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲಕ್ಷ್ಮಿ ಖವಾಸಿ ಪ್ರಾರ್ಥಿಸಿದರು. ರಾಜು ಕೊಕ್ಕನವರ ಸ್ವಾಗತಿಸಿದರು. ಸರಿತಾ ಶಿರಗುಪ್ಪಿ ನಿರೂಪಿಸಿದರು. ಈರಪ್ಪ ಸುತಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.