ಬಾಗಲಕೋಟೆ: ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯುವ ಪ್ರಯತ್ನ ಬಿಜೆಪಿಯಲ್ಲೇ ನಡೆದಿದೆ. ನಾವಂತೂ (ಕಾಂಗ್ರೆಸ್) ಸರ್ಕಾರ ಬೀಳಿಸೋಕೆ ಹೋಗೊಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಯಡಿಯೂರಪ್ಪ ಬಹಳ ದಿನ ಸಿಎಂ ಆಗಿ ಇರೊಲ್ಲ ಎಂದು ಶಾಸಕ ಬಸನಗೌಡ ಯತ್ನಾಳ ಅವರ ಹೇಳಿಕೆಯ ಬಗ್ಗೆ ಬಾದಾಮಿ ಪಟ್ಟಣದಲ್ಲಿ ಮಂಗಳವಾರ ಮಾಧ್ಯಮದವರ ಪ್ರಶ್ನೆಗೆ ಸಿದ್ದರಾಮಯ್ಯ ಮೇಲಿನಂತೆ ಪ್ರತಿಕ್ರಿಯಿಸಿದರು.
ಬಿಜೆಪಿಯವರ ಆಂತರಿಕ ತಿಕ್ಕಾಟದಿಂದ ಸಕಾ೯ರ ಬಿದ್ದು ಹೋದರೆ ನಾವು ಚುನಾವಣೆ ಎದುರಿಸಲು ಸಿದ್ಧ ಎಂದರು.
ಯಡಿಯೂರಪ್ಪನವರನ್ನು ಕೆಳಗಿಳಿಸೋ ಬಗ್ಗೆ ಚಚೆ೯ ನಡೀತಾ ಇರೋದು ನಿಜ. ಆದರೆ ಯಾವಾಗ ಇಳಿಸ್ತಾರೆ, ಯಾರು ಸಿಎಂ ಆಗ್ತಾರೆ ಅಂತ ನನಗೆ ಗೊತ್ತಿಲ್ಲ, ಚಚೆ೯ಯಂತೂ ನಡೀತಾ ಇದೆ ಎಂದು ಹೇಳಿದರು.
ಉತ್ತರ ಕನಾ೯ಟಕ ಭಾಗದವರು ಸಿಎಂ ಆಗಲಿದ್ದಾರೆ ಎಂಬ ಯತ್ನಾಳ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದು ಅವರ ಪಕ್ಷದ ವಿಚಾರ, ನಾನೇಕೆ ಮಾತನಾಡಲಿ, ಯಡಿಯೂರಪ್ಪ ಆ ಬಗ್ಗೆ ಮಾತನಾಡಲಿ ಎಂದು ಹೇಳಿದರು.
ಬಸನಗೌಡ ಪಾಟೀಲ ಯತ್ನಾಳ ಅವರ ಕ್ಷೇತ್ರದ ಅನುದಾನ ಕಡಿತಗೊಂಡ ನಂತರ ಅವರಲ್ಲಿ ಸಿಎಂ ಬಗ್ಗೆ ಅಸಮಾಧಾನವಾಗಿದೆ. ಪಾಪ ಅವರಿಗೂ ಈಗ ಬಿಸಿ ಮುಟ್ಟಿದೆ. ಹೀಗಾಗಿಯೇ ಸತ್ಯ ಹೇಳೋಕೆ ಶುರು ಮಾಡಿದ್ದಾರೆ ಎಂದು ಕಟುಕಿದರು.
ಶಿರಾ, ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವು ಈಗಾಗಲೇ ಗೆದ್ದಾಗಿದೆ. ಫಲಿತಾಂಶವೊಂದೇ ಬಾಕಿ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಆ ಎರಡೂ ಕ್ಷೇತ್ರಗಳು ಯಡಿಯೂರಪ್ಪ ಅವರ ಜೇಬಿನಲ್ಲಿವೆಯೇ ಎಂದು ಪ್ರಶ್ನಿಸಿದರು.
ಕುಣಿಲಾರದವರು ನೆಲ ಡೊಂಕು ಅಂದರಂತೆ ಎಂಬಂತಾಗಿದೆ ಎಚ್.ಡಿ.ಕುಮಾರಸ್ವಾಮಿ ಅವರ ವರ್ತನೆ. ಮುಖ್ಯಮಂತ್ರಿ ಆಗಿ ಕೆಲಸ ಮಾಡಲು ಆಗದೇ ಇರೋರು ಈಗ ಸಮ್ಮಿಶ್ರ ಸರ್ಕಾರ ಸಿದ್ದರಾಮಯ್ಯ ಕೆಡವಿದರು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಈ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗೋದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.