
ಬೀಳಗಿ: ‘ಕೃಷ್ಣಾ ಮೇಲ್ದಂಡೆ ಹಂತ –3 ಯೋಜನೆಯನ್ನು ಪಕ್ಷ ಅಧಿಕಾರಕ್ಕೆ ಬಂದರೆ ಪೂರ್ಣಗೊಳಿಸುವುದಾಗಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಅಂತೆಯೇ ಯೋಜನೆಗೆ ಬೇಕಿರುವ ಪರಿಹಾರ, ಪುನರ್ವಸತಿ, ಪುನರ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿ, ಬರುವ ಮೂರು ವರ್ಷಗಳ ಅವಧಿಯಲ್ಲಿ ಯೋಜನೆ ಮುಕ್ತಾಯ ಮಾಡುವ ಎಲ್ಲಾ ಸಿದ್ಧತೆ ನೆಡೆದಿದೆ. ಈ ಮೂಲಕ ಕೊಟ್ಟ ಮಾತಿನಂತೆ ನಡೆದಿದ್ದೇವೆ’ ಎಂದು ಶಾಸಕ ಜೆ.ಟಿ.ಪಾಟೀಲ ತಿಳಿಸಿದರು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಮುಳುಗಡೆ ಹೋರಾಟ ಸಮಿತಿ, ಸಂತ್ರಸ್ತ ರೈತರು ಹಮ್ಮಿಕೊಂಡಿದ್ದ ಸರ್ಕಾರಕ್ಕೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಆರ್.ಬಿ.ತಿಮ್ಮಾಪುರ, ಎಚ್.ಕೆ.ಪಾಟೀಲ, ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ, ಸೇರಿದಂತೆ ಹಲವಾರು ಸಚಿವರು ಈ ಯೋಜನೆಯ ಕುರಿತಾಗಿ ಈಚೆಗೆ ಚರ್ಚಿಸಿ, ಒಣಬೇಸಾಯದ ಪ್ರತಿ ಎಕರೆಗೆ ಜಮೀನಿಗೆ ₹30 ಲಕ್ಷ, ನೀರಾವರಿ ಪ್ರತಿ ಎಕರೆ ಜಮೀನಿಗೆ ₹40 ಲಕ್ಷ ಪರಿಹಾರ ಘೋಷಿಸಿರುವುದು ಸಂತಸ ತಂದಿದೆ’ ಎಂದರು.
‘ಆಲಮಟ್ಟಿ ಜಲಾಶಯ 525.256 ಮೀಟರ್ ಎತ್ತರ ಒಂದೇ ಹಂತದಲ್ಲಿ ಮಾಡುವುದರಿಂದ ಅಂದಾಜು 73,561 ಎಕರೆ ಭೂಮಿ ಮುಳಗಡೆಯಾಗಲಿದೆ. 51,800 ಎಕರೆ ಭೂಮಿ ಕಾಲುವೆ ನಿರ್ಮಾಣಕ್ಕೆ ಬೇಕಾಗಿದೆ ಹಾಗೂ 6641 ಎಕರೆ ಭೂಮಿ ಪುನರ್ವಸತಿ ಕೇಂದ್ರಗಳ ಸ್ಥಾಪನೆಗೆ ಬೇಕಾಗುವುದು. ಹೀಗೆ ಅಂದಾಜು ₹75 ಸಾವಿರ ಕೋಟಿ ವೆಚ್ಚ ಆಗಲಿದೆ. ಮೂರು ಹಂತಗಳಲ್ಲಿ ಪರಿಹಾರ ಹೆಚ್ಚಿಸುವ ಯೋಜನೆಯನ್ನು ಮಾಡಲಾಗುತ್ತದೆ. ತೋಟಗಾರಿಕೆ ಬೆಳೆಗಳಿಗೂ ಬೆಳೆಯ ಆಧಾರದಲ್ಲಿ ಪರಿಹಾರ ಸಿಗಲಿದೆ’ ಎಂದು ತಿಳಿಸಿದರು.
ಬಿಜೆಪಿ ತಪ್ಪಿನಿಂದ ಯೋಜನೆ ವಿಳಂಬ
‘ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಟಾಚಾರಕ್ಕೆ ಎಂಬಂತೆ ಪರಿಹಾರ ಘೋಷಣೆ ಮಾಡಿ ಯುಕೆಪಿ ಯೋಜನೆ ವಿಳಂಬ ಮಾಡಿದ್ದು, ಬಿಜೆಪಿ ಬೇಕಾಬಿಟ್ಟಿ ಕಾಮಾಗಾರಿ ಟೆಂಡರ್ ಕರೆದು ಅಂದಾಜು ₹ 2.77 ಕೋಟಿ ಸರ್ಕಾರಕ್ಕೆ ಹೊರೆ ಇಟ್ಟಿದೆ’ ಎಂದರು.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ,ಸೌದಾಗರ, ಕೆಂಪಲಿಂಗಣ್ಣವರ, ಮಲ್ಲಯ್ಯ ಕಂಬಿ,ಪ್ರಕಾಶ್ ಅಂತರಗೊಂಡ, ಮಹಾದೇವ ಹಾದಿಮನಿ ಮಾತನಾಡಿದರು.ಯಮನಪ್ಪ ರೊಳ್ಳಿ,ಶಿವನಗೌಡ ಪಾಟೀಲ, ಬಸವರಾಜ ಹಳ್ಳದಮನಿ, ಸಿದ್ದು ಸಾರಾವರಿ, ರಮೇಶ ಬಗಲಿ ಇದ್ದರು.
ಸಂತ್ರಸ್ತರಿಗೆ ಯೋಗ್ಯ ಪುನರ್ವಸತಿ ಮೂಲಸೌಕರ್ಯ ಸಂತ್ರಸ್ತರ ಮಕ್ಕಳ ಶಿಕ್ಷಣ ಜೊತೆಗೆ ಸಂತ್ರಸ್ತರ ಹಲವಾರು ವಿಷಯಗಳ ಕುರಿತಾಗಿ ಚರ್ಚೆ ಮಾಡಬೇಕಿದೆ.ಜೆ.ಟಿ.ಪಾಟೀಲ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.