ರಬಕವಿ ಬನಹಟ್ಟಿ: ಬನಹಟ್ಟಿ ನಗರ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದರೂ ಇಲ್ಲಿಯವರೆಗೆ ಒಂದು ಸುಸಜ್ಜಿತವಾದ ಗ್ರಂಥಾಲಯವಿಲ್ಲ. ಸದ್ಯ ಇಲ್ಲಿಯ ಓದುಗರಿಗೆ ಗ್ರಂಥಾಲಯದ ಕೊರತೆ ಇದೆ.
ಸ್ಥಳೀಯ ಕಾಡಸಿದ್ಧೇಶ್ವರ ದೇವಸ್ಥಾನದ ಮಾರ್ಗದಲ್ಲಿರುವ ನಗರಸಭೆ ವಾಣಿಜ್ಯ ಸಂಕೀರ್ಣದಲ್ಲಿರುವ ಗ್ರಂಥಾಲಯದಲ್ಲಿ ಸಾಕಷ್ಟು ಅನಾನುಕೂಲತೆಗಳಿವೆ. ಕಟ್ಟಡ ಎರಡೂವರೆ ದಶಕಗಳಷ್ಟು ಹಳೆಯದಾಗಿದ್ದು, ಅಲ್ಲಿನ ಮೂರು ಕೋಣೆಗಳು ಸೋರುತ್ತಿವೆ.
ಕೋಣೆಗಳು ಬಹಳಷ್ಟು ಚಿಕ್ಕದಾಗಿವೆ. ಒಂದನ್ನು ಓದುವ ಕೋಣೆಯನ್ನಾಗಿ ಮಾಡಿಕೊಳ್ಳಲಾಗಿದೆ. ಇಲ್ಲಿ ಏಳೆಂಟು ಜನರಿಗೆ ಮಾತ್ರ ಕುಳಿತುಕೊಂಡು ಓದಲು ಸ್ಥಳಾವಕಾಶವಿದೆ. ಬಹಳಷ್ಟು ಜನರು ಗ್ರಂಥಾಲಯ ಮುಂಭಾಗದ ಕಟ್ಟೆಯ ಮೇಲೆ ಕುಳಿತುಕೊಂಡು ಓದುತ್ತಾರೆ. ಇನ್ನೂ ಒಂದು ಕೋಣೆಯನ್ನು ಪುಸ್ತಕಗಳನ್ನು ಇಟ್ಟುಕೊಳ್ಳಲು ಮತ್ತು ಕಾರ್ಯಾಲಯಕ್ಕಾಗಿ ಬಳಸಿಕೊಳ್ಳಲಾಗಿದೆ. ಮತ್ತೊಂದರಲ್ಲಿ ಹೊಸ ಗ್ರಂಥಗಳನ್ನು ಇಟ್ಟುಕೊಳ್ಳಲಾಗಿದೆ. ಈಗ ಮೂರು ಕೋಣೆಗಳು ಮಳೆಯಿಂದಾಗಿ ಸೋರುತ್ತಿರುವುದರಿಂದ ಪುಸ್ತಕಗಳು, ದಿನ ಪತ್ರಿಕೆಗಳಿಗೆ ಹಾನಿಯಾಗಿವೆ.
ಗ್ರಂಥಾಲಯದಲ್ಲಿ ಅಂದಾಜು 21,000 ಪುಸ್ತಕಗಳಿವೆ. ಹೊಸ ಪುಸ್ತಕಗಳನ್ನು ಇಟ್ಟುಕೊಳ್ಳಲು ಸ್ಥಳ ಇಲ್ಲವಾಗಿದೆ. ಅವೆಲ್ಲವುಗಳನ್ನು ಚೀಲಗಳಲ್ಲಿ ಕಟ್ಟಿಡಲಾಗಿದೆ.
ಗ್ರಂಥಾಲಯಕ್ಕೆ ನಿವೇಶನ ನೀಡುವಂತೆ ಈಗಾಗಲೇ ಸಂಬಂಧಿಸಿದವರಿಗೆ ಹಲವಾರು ಬಾರಿ ಪತ್ರ ಬರೆದಿದ್ದಾರೆ. ಗ್ರಂಥಾಲಯಕ್ಕೆ ನಿವೇಶನ ನೀಡಿದ್ದೆ ಆದರೆ ಕೇಂದ್ರ ಗ್ರಂಥಾಲಯದವರು ಕಟ್ಟಡಕ್ಕಾಗಿ ಹಣ ನೀಡುತ್ತಾರೆ ಎಂದು ಮುಖ್ಯ ಗ್ರಂಥಾಲಯಾಧಿಕಾರಿ ಎಂ.ಎಸ್.ರೇಬನಾಳ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.