ಬಾಗಲಕೋಟೆ: ಬುದ್ಧಿ ಹೇಳಿದ ವ್ಯಕ್ತಿಯ ಕೊಲೆ ಮಾಡಿದ ಇಬ್ಬರು ಯುವಕರಿಗೆ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಮೇಶ ಏಕಬೋಟೆ, ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಬೀಳಗಿ ತಾಲ್ಲೂಕಿನ ಕೊಪ್ಪ ಎಸ್.ಆರ್. ಗ್ರಾಮದ ಸಂತೋಷ ಶಿರೂರ, ಮಂಜುನಾಥ ಬಿರಾದಾರ ಶಿಕ್ಷೆಗೆ ಗುರಿಯಾದ ಅಪರಾಧಿಗಳು.
ಸಂತೋಷ ಶಿರೂರ, ಕೊಲೆಯಾದ ಪವಾಡೆಪ್ಪ ತೆಲಗಿ ತಂಗಿಯೊಂದಿಗೆ ಸಲುಗೆಯಿಂದ ಇದ್ದನು. ಸಲುಗೆಯಿಂದ ಇರದಂತೆ ಪವಾಡೆಪ್ಪ, ಅಪರಾಧಿಗೆ ಬೈದು ಬುದ್ಧಿ ಹೇಳಿದ್ದರು.
ಇದರಿಂದ ಪವಾಡೆಪ್ಪ ಅವರ ಮೇಲೆ ಸಿಟ್ಟಿಗೆದ್ದ ಸಂತೋಷ ತನ್ನ ಸ್ನೇಹಿತ ಮಂಜುನಾಥನೊಂದಿಗೆ ಸೇರಿ ಕೊಲೆ ಮಾಡುವ ಸಂಚು ರೂಪಿಸಿದನು. ಕುರಿಮರಿಗೆ ತಪ್ಪಲು ತರಲು ಹೋಗೋಣ ಬಾ ಎಂದು ಫೋನ್ ಮಾಡಿ ಪವಾಡೆಪ್ಪ ಅವರನ್ನು ಕರೆಯಿಸಿಕೊಂಡನು.
ಹಾಗೆ ತಿರುಗುತ್ತಾ ಹೋಗಿ ಮರಳಿ ಬರುವಾಗ ಕೊಲೆ ಮಾಡಲು ತಂದಿದ್ದ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ. ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಶವವನ್ನು ತಪ್ಪದಲ್ಲಿ ತೆಗೆದುಕೊಂಡು ಹೋಗಿ, ಅದಕ್ಕೆ ಕಲ್ಲು ಕಟ್ಟಿ ನೀರಿನಲ್ಲಿ ಒಗೆದ್ದಿದ್ದರು. ಮೊಬೈಲ್ ಹಾಗೂ ಚಪ್ಪಲಿಯನ್ನು ನೀರಿನಲ್ಲಿ ಎಸೆದಿದ್ದರು.
ಬೀಳಗಿ ಪೊಲೀಸರು ಸಾಕ್ಷ್ಯಾಧಾರ ಸಂಗ್ರಹಿಸಿ, ಅಂದಿನ ತನಿಖಾಧಿಕಾರಿ ಸಂಜೀವ ಬಳೇಗಾರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಶಿಕ್ಷೆಯ ಜೊತೆಗೆ ಅಪರಾಧಿಗಳಿಗೆ ತಲಾ ₹70 ಸಾವಿರ ದಂಡ ವಿಧಿಸಲಾಗಿದೆ. ಸರ್ಕಾರದ ಪರವಾಗಿ ಅಭಿಯೋಜಕ ಎಸ್.ಎಂ. ಹಂಜಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.