ಹುನಗುಂದ ತಾಲ್ಲೂಕಿನ ಹಡಗಲಿ ಗ್ರಾಮದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರದಿಂದ ನಡೆಸಿದ ಕಾನೂನು ಅರಿವು ನೆರವು ಕರ್ಯಕ್ರಮವನ್ನು ಜಿಲ್ಲಾ ಸತ್ರ ನ್ಯಾಯಾಧೀಶ ಎನ್.ವಿ. ವಿಜಯ್ ಉದ್ಘಾಟಿಸಿದರು.
ಹುನಗುಂದ: ‘ಗ್ರಾಮೀಣ ಜನರು ಅನುಭವಿಸುವ ಸಮಸ್ಯೆಗಳ ಬಗ್ಗೆ ಕಾನೂನಿನ ಅರಿವು ಮೂಡಿಸುವ ಉದ್ದೇಶದಿಂದ ಹಡಗಲಿ ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್. ವಿ.ವಿಜಯ್ ಹೇಳಿದರು.
ತಾಲ್ಲೂಕಿನ ಹಡಗಲಿ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ಹುನಗುಂದ-ಇಳಕಲ್ ವಕೀಲರ ಸಂಘದ ಆಶ್ರಯದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಗ್ರಾಮಗಳಲ್ಲಿ ಕಾನೂನು ಅರಿವಿಲ್ಲದೆ ಬಾಲ್ಯ ವಿವಾಹ, ಅಪ್ರಾಪ್ತರಿಂದ ವಾಹನ ಚಾಲನೆ, ಪರವಾನಗಿ ಇಲ್ಲದೆ ವಾಹನ ಚಾಲನೆ, ಬೆದರಿಕೆ, ಕಾನೂನು ಉಲ್ಲಂಘನೆ, ಲೈಂಗಿಕ ಕಿರುಕುಳ ಹೀಗೆ... ಕಾನೂನಿನ ಅರಿವಿಲ್ಲದೆ ಸಾಕಷ್ಟು ತಪ್ಪುಗಳನ್ನು ಮಾಡಲಾಗುತ್ತಿದೆ. ವಿನಾಕಾರಣ ಜೀವನ ಮತ್ತು ಹಣ ಹಾಳು ಮಾಡಿಕೊಳ್ಳದೆ ಕಾನೂನಿಗೆ ಅನುಗುಣವಾಗಿ ನಡೆದು ನೆಮ್ಮದಿಯ ಜೀವನ ನಡಸಬೇಕು’ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸಂಚಾರಿ ನ್ಯಾಯಾಲಯದ ನ್ಯಾಯಾಧೀಶ ಜಿ. ಎ. ಮೂಲಿಮನಿ ಮಾತನಾಡಿ, ಸಮಾಜದಲ್ಲಿ ನೆಮ್ಮದಿ ಜೀವನ ಸಾಗಿಸಬೇಕಾದರೆ ಕಾನೂನಿನ ಮೊರೆ ಅನಿವಾರ್ಯ ಎಂದರು. ಹುನಗುಂದ ವಕೀಲ ಸಂಘದ ಅಧ್ಯಕ್ಷ ಪ್ರಕಾಶ ಕಠಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಕೀಲರಾದ ವಿ.ಆರ್. ಜನಾದ್ರಿ ಮತ್ತು ಮಹಾಂತೇಶ ಅವಾರಿ ಹೆಣ್ಣು ಮಕ್ಕಳ ದೌರ್ಜನ್ಯ ತಡೆ ಕಾಯ್ದೆ, ಮತ್ತು ಪೋಕ್ಸೊ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಹಿರಿಯ ದಿವಾಣಿ ನ್ಯಾಯಾಧೀಶ ಚಂದ್ರಶೇಖರ ದಿಡ್ಡಿ, ರಾಜ್ಯ ವಕೀಲ ಪರಿಷತ್ ಅಧ್ಯಕ್ಷ ಎಸ್.ಎಸ್. ಮಿಠ್ಠಲಕೋಡ, ಮಾಧವ ದೇಶಪಾಂಡೆ ಮಾತನಾಡಿದರು.
ಹಡಗಲಿ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪಟ್ಟಣದ ನ್ಯಾಯಾಲಯಗಳ ನ್ಯಾಯಾಧೀಶರಾದ ಹನಮಂತರಾವ್ ಕುಲಕರ್ಣಿ, ಬಸವರಾಜ ನೇಸರಗಿ,ಮಹಾಂತೇಶ ಮಠದ, ಇಳಕಲ್ ವಕೀಲರ ಸಂಘದ ಅಧ್ಯಕ್ಷ ಬಿ.ಎ. ಆವಟಿ, ಶಂಕ್ರಪ್ಪ ನೇಗಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.