
ಲೋಕಾಪುರ: ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಪಟ್ಟಣ ರಸ್ತೆಯಲ್ಲಿ ಮಾರ್ಗ ಫಲಕ ಇರದೇ ಇರುವುದರಿಂದ ಯಾವ ಕಡೆ ಹೋಗಬೇಕು ಎಂಬುದು ತಿಳಿಯದೇ ವಾಹನ ಸವಾರರು ಪರದಾಡುವಂತಾಗಿದೆ.
ರಾಯಚೂರು, ವಿಜಯಪುರ ಮತ್ತು ಬೆಳಗಾವಿ ಪ್ರಮುಖ ನಗರಗಳನ್ನು ಸಂಪರ್ಕಿಸುವ ಸ್ಧಳ ಲೋಕಾಪುರ. ಮಹಾರಾಷ್ಟ್ರ, ಗೋವಾ,ಮತ್ತು ತೆಲಂಗಾಣ ರಾಜ್ಯಗಳ ಸಂಪರ್ಕವನ್ನು ಹೊಂದಿರುವ ಸ್ಧಳವಾಗಿದೆ. ಪಟ್ಟಣ ಬಸವೇಶ್ವರ ವೃತ್ತದಲ್ಲಿ
ಬಸ್ ,ಲಾರಿ, ಕಾರು ಮುಂತಾದ ವಾಹನಗಳು ಪ್ರತಿದಿನ ಇಲ್ಲಿ ಸಂಚರಿಸುತ್ತವೆ. ಯಾವ ಊರು ಯಾವಕಡೆ ಬರುತ್ತದೆ. ಯಾವ ಕಡೆ ಹೋಗಬೇಕು ಎಂಬುದು ತಿಳಿಯದಾಗಿದೆ. ಹೊರರಾಜ್ಯದಿಂದ ಬರುವ ಜನರು ಬಾಷೆ ತಿಳಿಯದೇ ಗೊಂದಲಕ್ಕೀಡಾದ ಅನೇಕ ಘಟನೆಗಳು ನಡೆದಿವೆ. ತೆಲಂಗಾಣ, ಆಂಧ್ರ ಪ್ರದೇಶದ ಜನರು ಗೋವಾಕ್ಕೆ ಹೋಗುತ್ತಾರೆ. ಪಟ್ಟಣಕ್ಕೆ ಬಂದ ನಂತರ ಯಾವಕಡೆ ಹೋಗಬೇಕು ಎಂಬುದು ತಿಳಿಯದಾಗುತ್ತದೆ. ಇದರಿಂದ ತೊಂದರೆಯಾಗುವುದು ಸಾಮಾನ್ಯವಾಗಿದೆ. ಇನ್ನು ಮಹಾರಾಷ್ಟ್ರದ ಜನರು ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಮತ್ತು ಬಾದಾಮಿ ಕಡೆಗೆ ಹೋಗುತ್ತಾರೆ.ಅವರು ಕೂಡ ಮಾರ್ಗ ಫಲಕ ಇಲ್ಲದೇ ಇಲ್ಲಿಯ ಜನರನ್ನು ಕೇಳುವ ಪರಿಸ್ಧಿತಿ ಅನಿವಾರ್ಯವಾಗಿದೆ.
ಕೆಲವೊಮ್ಮೆ ಭಾಷೆಯ ತೊಂದರೆ ತಲೆದೋರುತ್ತದೆ. ಅನೇಕ ಲಾರಿಗಳು ಸಹ ಯಾವ ಮಾರ್ಗದಲ್ಲಿ ಚಲಿಸಬೇಕು ಎಂದು ತಿಳಿಯದೇ ಬೇರೆ ಮಾರ್ಗದಲ್ಲಿ ಹೋದ ಹಲವಾರು ಘಟನೆಗಳು ನಡೆದಿವೆ. ರಸ್ತೆಯಲ್ಲಿ ನಿಂತು ಮಾರ್ಗದ ಕುರಿತು ವಿಚಾರಿಸುವ ಸಂದರ್ಭದಲ್ಲಿ ಸಂಚಾರ ದಟ್ಟಣೆಗೊಂಡು ಜನರು ನಡೆದಾಡುವುದು ಕೂಡ ದುಸ್ತರವಾಗುತ್ತದೆ. ಹಾಗಾಗಿ ಇಲ್ಲಿ ಮಾರ್ಗ ಫಲಕಗಳನ್ನು ಅಳವಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.