ಮಹಾಲಿಂಗಪುರ: ಪಟ್ಟಣದ ಮಹಾಲಿಂಗೇಶ್ವರ ಜಾತ್ರೆ ಅಂಗವಾಗಿ ನಾಲ್ಕನೇ ದಿನವಾದ ಸೋಮವಾರ ಹಮ್ಮಿಕೊಂಡ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ಚಾಂಪಿಯನ್, ಮಹಾರಾಷ್ಟ್ರದ ಪೈಲ್ವಾನ್ ಸಿಕಂದರ್ ಶೇಖ್ ಗೆಲುವಿನ ನಗೆ ಬೀರಿದರು.
ಮಹಾತ್ಮ ಗಾಂಧಿ ಕ್ರೀಡಾಂಗಣದ ಕುಸ್ತಿ ಕಣದಲ್ಲಿ ಪ್ರಮುಖ ಐದು ಜೋಡಿ ಸೇರಿ 40ಕ್ಕೂ ಹೆಚ್ಚು ಜೋಡಿ ಕುಸ್ತಿಪಟುಗಳು ಜಂಗಿ ನಿಕಾಲಿ ಕುಸ್ತಿ ಆಡಿದರು.
ಪ್ರಥಮ ಕ್ರಮಾಂಕದ ಕುಸ್ತಿಯಲ್ಲಿ ಹರಿಯಾಣ ಕೇಸರಿ ವೀರೇಂದ್ರ ಅವರನ್ನು ಸಿಕಂದರ್ ಶೇಖ್ ಐದು ನಿಮಿಷದಲ್ಲಿ ಎತ್ತಿ ಒಗೆದು ಸಂಭ್ರಮಿಸಿದರು. ಸಚಿವ ಶಿವಾನಂದ ಪಾಟೀಲ ಇಬ್ಬರು ಪೈಲ್ವಾನ್ರ ಕೈಕೈ ಮಿಲಾಯಿಸಿ ಕುಸ್ತಿಗೆ ಚಾಲನೆ ನೀಡಿದರು.
ಎರಡನೇ ಕ್ರಮಾಂಕದಲ್ಲಿ ಹರಿಯಾಣ ಕೇಸರಿ ಹರೀಶಕುಮಾರ ಅವರನ್ನು ದಾವಣಗೆರೆಯ ಕರ್ನಾಟಕ ಕೇಸರಿ ಕಾರ್ತಿಕ ಕಾಟೆ ಸೋಲಿಸಿದರು. ಮೂರನೇ ಕ್ರಮಾಂಕದಲ್ಲಿ ಕರ್ನಾಟಕ ಕಂಠೀರವ ಶಿವಯ್ಯ ಪೂಜಾರಿ ಹಾಗೂ ಮಹಾರಾಷ್ಟ್ರದ ಕುರಡೆವಾಡಿಯ ಅಬುಬುಕರ್ ಚೌಸ್ ಅವರ ಮಧ್ಯೆದ ಕುಸ್ತಿ ನಿಕಾಲಿಯಾಗದೆ ಸಮಬಲ ಸಾಧಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಪಂಜಾಬ ಕೇಸರಿ ಪ್ರದೀಪಸಿಂಗ್ ಅವರನ್ನು ಕೊಲ್ಲಾಪುರದ ಶಾವಪುರಿಯ ಕರ್ನಾಟಕ ಕೇಸರಿ ನಾಗರಾಜ ಬಸಿಡೋನಿ, ಐದನೇ ಕ್ರಮಾಂಕದಲ್ಲಿ ಮಹಾರಾಷ್ಟ್ರದ ಅಕ್ಷಯ ಪಾಟೀಲ ಅವರನ್ನು ಗೋಡಗೇರಿಯ ಪ್ರಕಾಶ ಇಂಗಳೆ ಸೋಲಿಸಿ ವಿಜೇತರಾದರು.
ಹಾರೂಗೇರಿ, ಜಗದಾಳ, ಮಸರಗುಪ್ಪಿ, ಇಂಗಳೆ, ಅಥಣಿ, ಹನಗಂಡಿ, ಚಿಮ್ಮಡ, ಬನಹಟ್ಟಿ, ರಾಜಾಪುರ, ಮುಗಳಖೋಡ ಸೇರಿದಂತೆ ವಿವಿಧ ಭಾಗದ ಕುಸ್ತಿಪಟುಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.