ADVERTISEMENT

ತಪ್ಪು ಮಾಹಿತಿ ಹೊಂದಿದ ಪಠ್ಯ ಹಿಂಪಡೆಯಿರಿ: ಮಾತೆ ಗಂಗಾದೇವಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 14:42 IST
Last Updated 1 ಜೂನ್ 2022, 14:42 IST
ಮಾತೆ ಗಂಗಾದೇವಿ
ಮಾತೆ ಗಂಗಾದೇವಿ   

ಕೂಡಲಸಂಗಮ(ಬಾಗಲಕೋಟೆ ಜಿಲ್ಲೆ): ‘ಬಸವಣ್ಣನ ಕುರಿತು ತಪ್ಪುಮಾಹಿತಿ ಹೊಂದಿದ 9ನೇ ತರಗತಿ ಸಮಾಜ ವಿಜ್ಞಾನದ ಪಠ್ಯವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ತಪ್ಪಿದಲ್ಲಿ ರಾಜ್ಯದಾದ್ಯಂತ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ’ ಎಂದು ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಎಚ್ಚರಿಸಿದ್ದಾರೆ.

‘ಸಂಪ್ರದಾಯಕ್ಕಿಂತ ಸತ್ಯ ಶ್ರೇಷ್ಠ ಎಂದು ಉಪನಯನ ಧಿಕ್ಕರಿಸಿ ಬಂದ ಬಸವಣ್ಣನನ್ನು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪರಿಷ್ಕರಣೆ ಸಮಿತಿ ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗದೀಕ್ಷೆ ಪಡೆದು ಧ್ಯಾನ ಸಾಧನೆ ಮಾಡಿದರು, ವೀರಶೈವ ಮತವನ್ನು ಅಭಿವೃದ್ಧಿ ಪಡಿಸಿದರು ಎಂದು ಇತಿಹಾಸ ತಿರುಚಿ ಬಸವಣ್ಣನಿಗೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ’ ಎಂದು ದೂರಿದ್ದಾರೆ.

‘ಬಸವಣ್ಣನೇ ಇಷ್ಟಲಿಂಗ ಜನಕ ಎಂದು ಅನೇಕ ಶರಣರು ವಚನಗಳಲ್ಲಿ ಉಲ್ಲೇಖಿಸಿದ್ದಾರೆ, ಲಿಂಗಾಯತ ಧರ್ಮ ಸ್ಥಾಪಕ ಬಸವಣ್ಣ ಎನ್ನುವ ಸತ್ಯದ ಅರಿವು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ಇದ್ದರೂ ಉದ್ದೇಶಪೂರ್ವಕವಾಗಿ ವೀರಶೈವ ಮತವನ್ನು ಅಭಿವೃದ್ಧಿ ಪಡಿಸಿದರು ಎಂದು ತಿರುಚಿರುವುದು ಖಂಡನೀಯ’ ಎಂದಿದ್ದಾರೆ.

ADVERTISEMENT

‘ದೋಷಪೂರಿತ ಪಠ್ಯವನ್ನು ಸರ್ಕಾರ ಕೂಡಲೇ ಹಿಂಪಡೆದು, ವಚನ ಸಾಹಿತ್ಯದ ಜ್ಞಾನ ಇರುವ ತಜ್ಞರಿಂದ ಸೂಕ್ತ ತಿದ್ದುಪಡಿ ಮಾಡಿಸಬೇಕು. ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯವನ್ನು ನಾಡಿನ ಹಿರಿಯ ಸಾಹಿತಿಗಳು, ಪ್ರಗತಿಪರ ಚಿಂತಕರು, ಶಿಕ್ಷಣ ತಜ್ಞರಿಂದ ಸರ್ಕಾರ ಮಾಡಿಸಬೇಕು’ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.