ವಿಜಯಾನಂದ ಕಾಶಪ್ಪನವರ
ಕೂಡಲಸಂಗಮ (ಬಾಗಲಕೋಟೆ): ‘ಯತ್ನಾಳ ಉಚ್ಚಾಟನೆ ಒಂದು ಪಕ್ಷದ ನಿರ್ಣಯವೇ ಹೊರತು ಪಂಚಮಸಾಲಿ ಸಮಾಜ, ಪೀಠದ ನಿರ್ಣಯವಲ್ಲ. ಅದನ್ನು ಸಮಾಜಕ್ಕೆ ತಳಕು ಹಾಕುವ ಕೆಲಸ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾಡಬಾರದು’ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
‘ಉಚ್ಚಾಟನೆ ವಿಷಯಕ್ಕೆ ಪೂರಕವಾಗಿ ಹೋರಾಟಕ್ಕೆ ಕರೆ ಕೊಡಲು ಸ್ವಾಮೀಜಿಗೆ ನೈತಿಕ ಹಕ್ಕಿಲ್ಲ. ಗುರುಗಳು ಎಲ್ಲ ನಾಯಕರಿಗೂ ಸಮಾನವಾಗಿರಬೇಕು. ಒಂದು ಪಕ್ಷ, ವ್ಯಕ್ತಿಗೆ ಸೀಮಿತ
ರಾಗಬಾರದು. ಗುರುಗಳಿಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಆದರೆ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷನಾಗಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
‘ಗುರುಗಳು ಹಲವು ತಪ್ಪು ಹೆಜ್ಜೆ ಇಟ್ಟಿದ್ದಾರೆ. ರಾಜೀನಾಮೆಗೆ ಕರೆಕೊಟ್ಟರೆ, ಸಮಾಜದ ಶಾಸಕರು ರಾಜೀನಾಮೆ ಕೊಡಲ್ಲ. ನಾವು ಜನರನ್ನು ನಂಬಿ ರಾಜಕಾರಣ ಮಾಡುತ್ತೇವೆ ಹೊರತು ಗುರುಗಳನ್ನು ಆಧರಿಸಿ ಅಲ್ಲ. ಗುರುಗಳು ಇಂಥ ವಿಷಯ ಚರ್ಚಿಸಬಾರದು. ನಾವು ಈಗಾಗಲೇ ಅವರನ್ನು ಬಿಜೆಪಿಯ ಗುರುಗಳು ಎಂದು ಪರಿಗಣಿಸಿದ್ದೇವೆ’ ಎಂದರು.
‘ಬಸವಣ್ಣನವರ ಬಗ್ಗೆ ಕೀಳಾಗಿ ಮಾತಾಡಿದಕ್ಕೆ ಯತ್ನಾಳ ಅವರಿಗೆ ಈ ಗತಿ ಬಂದಿದೆ. ಬಿಜೆಪಿ ಸೂಕ್ತ ನಿರ್ಣಯ ತೆಗೆದುಕೊಂಡಿದೆ. ಒಂದು ವೇಳೆ ಯತ್ನಾಳ ಕಾಂಗ್ರೆಸ್ಗೆ ಸೇರ್ಪಡೆಯಾದರೆ, ನಾನು ವಿರೋಧಿಸುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.