
ಮುಧೋಳ: ದೇಶದ ಸ್ವಾತಂತ್ರಕ್ಕಾಗಿ ಅತೀ ಹೆಚ್ಚು ಬಾರಿ ಬ್ರಿಟಿಷರ ವಿರುದ್ಧ ಹೋರಾಡಿದವರಲ್ಲಿ ಮೈಸೂರಿನ ಟಿಪ್ಪು ಸುಲ್ತಾನ ಪ್ರಮುಖರು ಎಂದು ವಕೀಲ ಯಲ್ಲಪ್ಪ ಹೆಗ್ಡೆ ಹೇಳಿದರು.
ಗುರುವಾರ ಬಸವೇಶ್ವರ ವೃತ್ತದ ಹತ್ತಿರ ಸುಲ್ತಾನ ಕ್ರಿಯೇಶನ್ ಯುವಕರ ಸಹಯೋಗದಲ್ಲಿ ಹಜರತ ಟಿಪ್ಪು ಸುಲ್ತಾನರ ಜಯಂತ್ಯುತ್ಸವ ಆಚರಣೆಯಲ್ಲಿ ಅವರು ಮಾತನಾಡಿದರು.
‘ಕನ್ನಡ ನಾಡಿನ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರು ಸಾಮಾಜಿಕ ನ್ಯಾಯ, ಪರಿಸರ, ರೇಷ್ಮೆ ಬೆಳೆ, ಕೃಷಿ ಮೇಲೆ ಅಪಾರ ಕಾಳಜಿ ಹೊಂದಿದ್ದರು. ಇಂತಹ ಮಹಾನ ವ್ಯಕ್ತಿಯ ತೇಜೋವಧೆ ಮಾಡಬಾರದು’ ಎಂದು ಹೇಳಿದರು.
ಯುವ ಮುಖಂಡ ಫಜಲ್ ಮೋಮಿನ ಮತ್ತು ರಾಜು ಜಮಾದಾರ ಮಾತನಾಡಿ, ನಾಡಿನ ಅನೇಕ ಮಹನೀಯರ ಜಯಂತ್ಯುತ್ಸವ ಸರ್ಕಾರದಿಂದ ಆಚರಿಸುವಂತೆ ಟಿಪ್ಪು ಅವರ ಜಯಂತಿ ಕೂಡ ಆಚರಿಸಬೇಕು. ಶಾಲಾ ಪಠ್ಯಪುಸ್ತಕದಲ್ಲಿ ಇವರ ಜೀವನ ಚರಿತ್ರೆ ತಿಳಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರಮುಖರಾದ ರಫೀಕ್ ಖಾನಮಹ್ಮದ್, ಉಮರಬೇಗ್ ಜಮಾದಾರ, ಅಂಜುಮನ್ ಕಮೀಟಿ ಸದಸ್ಯರಾದ ರಫೀಕ್ ಪಠಾಣ, ವಕೀಲ ಬಿಲಾಲ ಬಾಣದಾರ, ಸುಲೇಮಾನ್ ಅಂಬಿ, ಡಾ.ಸೈಪುದ್ದಿನ್ ಕರ್ಜಗಿ, ಯುಸೂಫ್ ಜಮಾದಾರ, ಇರ್ಫಾನ ಸುರಪುರ, ಜಾವೇದ್ ಸಾಂಗಲಿಕರ, ಬಂದೇನವಾಜ ಧಾರವಾಡಕರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.