ADVERTISEMENT

ಪಂಚಮಸಾಲಿ ಸಮಾಜಕ್ಕೆ ಹರಿಹರ ಪೀಠವೇ ಮೂಲ ಮಠ, ಮೂರನೇ ಪೀಠ ಅದರ ಅಂಗ: ಸಂಘಟಕರು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 8:29 IST
Last Updated 13 ಫೆಬ್ರುವರಿ 2022, 8:29 IST
ಸಚಿವ ಮುರುಗೇಶ ನಿರಾಣಿ ಹಾಗೂ ಕಮಲ ದಂಪತಿಯ ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯನ್ನು ಮಠಾಧೀಶರ ಒಕ್ಕೂಟದಿಂದ ಸನ್ಮಾನಿಸಲಾಯಿತು.
ಸಚಿವ ಮುರುಗೇಶ ನಿರಾಣಿ ಹಾಗೂ ಕಮಲ ದಂಪತಿಯ ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯನ್ನು ಮಠಾಧೀಶರ ಒಕ್ಕೂಟದಿಂದ ಸನ್ಮಾನಿಸಲಾಯಿತು.   

ಬಾಗಲಕೋಟೆ: 'ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಹರಿಹರ ಪೀಠವೇ ಮೂಲಪೀಠ. ಆಲಗೂರಿನ ಮೂರನೇ ಪೀಠ ಅದರ ಭಾಗವಾಗಿ ಕೆಲಸ ಮಾಡಲಿದೆ' ಎಂದು ಡಾ.ಮಹಾದೇವ ಶಿವಾಚಾರ್ಯ ಪಟ್ಟಾಧಿಕಾರದ ನಂತರ ಅವರಿಗೆ ಬಿನ್ನವತ್ತಳೆ ಅರ್ಪಣೆ ವೇಳೆ ಸಂಘಟಕರು ಘೋಷಣೆ ಮಾಡಿದರು.

ಜಮಖಂಡಿ ತಾಲ್ಲೂಕಿನ ಆಲಗೂರಿನಲ್ಲಿ ಭಾನುವಾರ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಮೂರನೇ ಪೀಠದಲ್ಲಿ ನಡೆದ ನೂತನ ಶ್ರೀಗಳ ಪೀಠಾರೋಹಣ ವೇಳೆ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಅವರು ಡಾ.ಮಹಾದೇವ ಶಿವಾಚಾರ್ಯ ಶ್ರೀಗಳಿಗೆ ರುದ್ರಾಕ್ಷಿ ಕಿರೀಟ ತೊಡಿಸಿದರು.

ಇದೇ ವೇಳೆ ಹರಿಹರ ವೀರಶೈವ ಪಂಚಮಸಾಲಿ ಪೀಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಿ.ಸಿ.ಉಮಾಪತಿ ಹಾಗೂ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಪ್ರಭಣ್ಣ ಹುಣಶಿಕಟ್ಟಿ ಅವರನ್ನು ಸಂಘಟಕರು ಸನ್ಮಾನಿಸಿದರು.

ADVERTISEMENT

ಮದುವೆ ವಾರ್ಷಿಕೋತ್ಸವ- ನಿರಾಣಿ ದಂಪತಿಗೆ ಸನ್ಮಾನ:

ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹಾಗೂ ಕಮಲ ದಂಪತಿಯ ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯನ್ನು ಮಠಾಧೀಶರ ಒಕ್ಕೂಟದಿಂದ ಸನ್ಮಾನಿಸಲಾಯಿತು.

ಮುರುಗೇಶ ನಿರಾಣಿ ಅವರಿಗೆ ಬೆಳ್ಳಿ ಗದೆ ನೀಡಿ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಶ್ರೀಗಳು ಸೇರಿ ಗೌರವಿಸಿದರು. ಈ ವೇಳೆ ಸಂಸದ ಪಿ.ಸಿ.ಗದ್ದಿಗೌಡರ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಶಾಸಕ ಜಿ.ಎಸ್.ನ್ಯಾಮಗೌಡ ಹಾಜರಿದ್ದರು.

ದೂರ ಉಳಿದ ಶ್ರೀಗಳು, ಗಣ್ಯರು: ಸಮಾರಂಭದಿಂದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ದೂರ ಉಳಿದರು.

ಪಂಚಮಸಾಲಿ ಸಮಾಜದವರೇ ಆದ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಕೂಡ ಬರಲಿಲ್ಲ. ಆರ್ಟ್ ಆಫ್ ಲೀವಿಂಗ್ ನ ಶ್ರೀ ಶ್ರೀಶ್ರೀ ರವಿಶಂಕರ ಗುರೂಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದರು. ಆದರೆ ಅವರು ಬರಲಿಲ್ಲ.

ನಿರಾಣಿ ಸಿಎಂ ಅಗಲಿದ್ದಾರೆ: ಬಸವರಾಜ ಬೊಮ್ಮಯಿ ಅವರ ಅಧಿಕಾರಾವಧಿ ಇನ್ನು 12 ತಿಂಗಳು ಇದ್ದು, ನಂತರ ಮುರುಗೇಶ ನಿರಾಣಿ ಸಿಎಂ ಆಗಲಿದ್ದಾರೆ ಎಂದು ಕಲಬುರ್ಗಿಯ ಸುಲಫಲ ಮಠದ ಸಾರಂಗ ದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.