ತೇರದಾಳ: ತಮ್ಮ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ತೇರದಾಳ ತಾಲ್ಲೂಕು ಗೋಲಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲತಿಪ್ಪಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರು ಸೋಮವಾರ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು, ಅಧಿಕಾರಿಗಳ ಜೊತೆಗೆ ವಾಗ್ವಾದ ನಡೆಸಿದರು.
‘ನರೇಗಾ ಕಾಮಗಾರಿ ಮಾಡಿದ ಕಾರ್ಮಿಕರ ವೇತನವನ್ನು ಅವರ ಖಾತೆಗೆ ಜಮೆ ಮಾಡುತ್ತಿಲ್ಲ. ಆಶ್ರಯ ಮನೆಗಳ ಬಿಲ್ ಆಗಿ ಜಿಪಿಎಸ್ ಮಾಡುತ್ತಿಲ್ಲ. ದನಗಳ ಶೆಡ್ ನಿರ್ಮಾಣಕ್ಕೆ ಅನುದಾನ ಮೀಸಲಿಟ್ಟಿದ್ದರು ಮಂಜೂರು ಮಾಡುತ್ತಿಲ್ಲ’ ಎಂದು ಸದಸ್ಯರಾದ ಶಂಕರ ಉಗಾರ, ಚಂದ್ರಶೇಖರ ಸನದಿ, ಮಲ್ಲಪ್ಪ ಉಗಾರ, ಮುಖಂಡರಾದ ಗಜಾನನ ಕರಿಗಾರ, ಅಶೋಕ ರೆಡ್ಡಿ, ಸುರೇಶ ವಡರಟ್ಟಿ ಪಿಡಿಒ ಅವರನ್ನು ತರಾಟೆಗೆ ತಗೆದುಕೊಂಡರು.
‘ಅನುದಾವಿದ್ದರೂ ಕೊಳವೆ ಬಾವಿ ಕೊರೆಸುತ್ತಿಲ್ಲ. ನೀರಿನ ಟ್ಯಾಂಕ್ ಪೈಪ್ ಒಡೆದ ಕಾರಣ ನೀರು ಸರಬರಾಜು ಆಗುತ್ತಿಲ್ಲ. ಯಾವುದೇ ಸಮಸ್ಯೆ ಗಮನಕ್ಕೆ ತಂದರೂ ಕೇವಲ ಸಬೂಬು ಹೇಳುತ್ತಿರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಭೇಟಿ ನೀಡುವವರೆಗೆ ಬೀಗ ತೆಗೆಯುವುದಿಲ್ಲ ಎಂದು ಹಠ ಹಿಡಿದರು. ಕೊನೆಗೆ ಇಒ ಮಂಗಳವಾರ ಬರುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಟ್ಟರು. ಶಂಕರ ರೆಡ್ಡಿ, ಮುತ್ತಪ್ಪ ಸವಸುದ್ದಿ, ಪರಪ್ಪ ಜಗದಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.