ADVERTISEMENT

ಪ್ರಧಾನಿ ಜೊತೆ ‘ಪರೀಕ್ಷಾ ಪೆ ಚರ್ಚಾ’ಗೆ ಪೂರ್ಣಿಮಾ ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 3:02 IST
Last Updated 7 ಜನವರಿ 2020, 3:02 IST
   

ಬಾಗಲಕೋಟೆ: ಪ್ರಧಾನಿ ನರೇಂದ್ರಮೋದಿ ಶಾಲಾ ಮಕ್ಕಳೊಂದಿಗೆ ದೆಹಲಿಯಲ್ಲಿ ಜನವರಿ 20ರಂದು ನಡೆಸಲಿರುವ ’ಪರೀಕ್ಷಾ ಪೆ ಚರ್ಚಾ’ ಸಂವಾದದಲ್ಲಿ ಹುನಗುಂದ ತಾಲ್ಲೂಕಿನ ತಾರಿವಾಳದ ಪೂರ್ಣಿಮಾ ರೇವಣಸಿದ್ದಪ್ಪ ನಾಶಿ ಪಾಲ್ಗೊಳ್ಳಲಿದ್ದಾರೆ.

ಪೂರ್ಣಿಮಾ ತಾರಿವಾಳ ಸಮೀಪದ ಜಂಬಲದಿನ್ನಿಯ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ. ‘ಪರೀಕ್ಷಾ ಪೆ ಚರ್ಚಾ’ ಸಂವಾದದ ಪೂರ್ವಭಾವಿಯಾಗಿ ಆನ್‌ಲೈನ್‌ನಲ್ಲಿ ’ಎಕ್ಸಾಮಿಂಗ್ ಎಕ್ಸಾಮ್’ ವಿಷಯದ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪೂರ್ಣಿಮಾ ಭಾಗವಹಿಸಿದ್ದರು. ಆನ್‌ಲೈನ್‌ನಲ್ಲಿಯೇ ಪ್ರಬಂಧ ಬರೆದು ಮಂಡಿಸಿದ್ದು, ಅದಕ್ಕೆ ಈ ಮೊದಲು ಪ್ರಮಾಣಪತ್ರವೂ ಬಂದಿತ್ತು. ಈಗ ಸಂವಾದಕ್ಕೆ ಆಯ್ಕೆಯಾಗಿರುವ ಮಾಹಿತಿ ಬಂದಿದೆ.

ಪೂರ್ಣಿಮಾ ಜನವರಿ 16ರಂದು ಬೆಂಗಳೂರಿಗೆ ತೆರಳಿ ಕರ್ನಾಟಕದಿಂದ ಹೊರಡುವ ವಿದ್ಯಾರ್ಥಿಗಳ ತಂಡ ಸೇರಿಕೊಳ್ಳಲಿದ್ದಾರೆ.‍ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡುವುದೇ ನಮಗೆಲ್ಲ ಖುಷಿ. ಅಂತಹದರಲ್ಲಿ ಅವರೊಂದಿಗೆ ಸಂವಾದದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ಪೂರ್ಣಿಮಾ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.