ADVERTISEMENT

ಚಿಕ್ಕಮಕ್ಕಳ ನರಸಂಬಂಧಿ ಕಾಯಿಲೆಗೆ ಸೂಕ್ತ ಚಿಕಿತ್ಸೆ ಅಗತ್ಯ: ಡಾ.ಸುರೇಶರಾವ್

ಚಿಕ್ಕಮಕ್ಕಳ ನರರೋಗ ತಜ್ಞರ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 3:13 IST
Last Updated 28 ಜುಲೈ 2025, 3:13 IST
ಬಾಗಲಕೋಟೆಯ ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಚಿಕ್ಕಮಕ್ಕಳ ನರರೋಗ ತಜ್ಞರ 10ನೇ ವಾರ್ಷಿಕ ಸಮ್ಮೇಳನವನ್ನು ಡಾ.ಸುರೇಶರಾವ್ ಅರೂರ್ ಉದ್ಘಾಟಿಸಿದರು
ಬಾಗಲಕೋಟೆಯ ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಚಿಕ್ಕಮಕ್ಕಳ ನರರೋಗ ತಜ್ಞರ 10ನೇ ವಾರ್ಷಿಕ ಸಮ್ಮೇಳನವನ್ನು ಡಾ.ಸುರೇಶರಾವ್ ಅರೂರ್ ಉದ್ಘಾಟಿಸಿದರು   

ಬಾಗಲಕೋಟೆ: ‘ಚಿಕ್ಕಮಕ್ಕಳಲ್ಲಿ ಕಾಣಿಸಿಕೊಳ್ಳುವ ಅನೇಕ ಪ್ರಕಾರದ ನರಸಂಬಂಧಿ ಕಾಯಿಲೆಗಳಿಗೆ ಆರಂಭದ ಹಂತದಲ್ಲೇ ಸೂಕ್ತ ಚಿಕಿತ್ಸೆ ನೀಡುವುದು ಅಗತ್ಯವಾಗಿದೆ’ ಎಂದು ಬೆಂಗಳೂರಿನ ಚಿಕ್ಕಮಕ್ಕಳ ನರರೋಗ ತಜ್ಞ ಡಾ.ಸುರೇಶರಾವ್ ಅರೂರ್ ಅಭಿಪ್ರಾಯಪಟ್ಟರು.

ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಚಿಕ್ಕಮಕ್ಕಳ ವಿಭಾಗ, ಕರ್ನಾಟಕ ಅಕಾಡೆಮಿ ಆಫ್ ಪಿಡಿಯಾಟ್ರಿಕ್ ನ್ಯೂರಾಲಜಿ ಮತ್ತು ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ ಬಾಗಲಕೋಟೆ ಶಾಖೆ ಇವುಗಳ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಚಿಕ್ಕಮಕ್ಕಳ ನರರೋಗ ತಜ್ಞರ 10ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಚಿಕ್ಕಮಕ್ಕಳ ನರರೋಗ ಶಾಸ್ತ್ರಕ್ಕೆ ಐದು ದಶಕಗಳ ಹಿನ್ನೆಲೆ ಇದೆ. 50 ವರ್ಷಗಳ ಹಿಂದೆ ಚಿಕ್ಕಮಕ್ಕಳ ನರರೋಗ ತಜ್ಞರ ಸಂಖ್ಯೆ ಕಡಿಮೆಯಿತ್ತು. ಈಚಿನ ದಿನಗಳಲ್ಲಿ ಮಕ್ಕಳಲ್ಲಿ ನರಸಂಬಂಧಿತ ಕಾಯಿಲೆಗಳು ಹೆಚ್ಚು ಕಾಣಿಸಿಕೊಳ್ಳುತ್ತಿರುವ ಪರಿಣಾಮವಾಗಿ ಪ್ರಸ್ತುತ ಚಿಕ್ಕಮಕ್ಕಳ ನರರೋಗಶಾಸ್ತ್ರದ ವ್ಯಾಪ್ತಿ ವಿಸ್ತರಿಸಿದೆ’ ಎಂದು ಹೇಳಿದರು.

ADVERTISEMENT

ಅತಿಥಿ ಕರ್ನಾಟಕ ಅಕಾಡೆಮಿ ಆಫ್ ಪಿಡಿಯಾಟ್ರಿಕ್ ನ್ಯೂರಾಲಜಿಯ ಅಧ್ಯಕ್ಷ ಡಾ.ಸಿ.ಪಿ.ರವಿಕುಮಾರ ಮಾತನಾಡಿ, ‘ಚಿಕ್ಕಮಕ್ಕಳ ನರರೋಗಶಾಸ್ತ್ರ ಕೇವಲ ಮಕ್ಕಳಲ್ಲಿ ಕಂಡುಬರುವ ಚಲನೆಯ ಅಸ್ವಸ್ಥತೆಗೆ ಸಂಬಂಧಿಸಿದ್ದಲ್ಲ. ಮಕ್ಕಳಲ್ಲಿನ ವಿವಿಧ ಪ್ರಕಾರದ ನರರೋಗ ಕಾಯಿಲೆಗಳಿಗೆ ಸಂಬಂಧಿಸಿದೆ. ಚಿಕ್ಕಮಕ್ಕಳ ನರರೋಗಶಾಸ್ತ್ರದ ವಿಷಯದಲ್ಲಿ ಹೊಸ ಹೊಸ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ. ಹೀಗಾಗಿ ತಜ್ಞರ ಸಂಖ್ಯೆಯೂ ಹೆಚ್ಚಿದೆ’ ಎಂದರು.

ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ‘ಸಮ್ಮೇಳನದಲ್ಲಿ ಚಿಕ್ಕಮಕ್ಕಳ ನರರೋಗಶಾಸ್ತ್ರದಲ್ಲಿನ ಹೊಸ ಹೊಸ ಅವಿಷ್ಕಾರಗಳ ಕುರಿತು ಚರ್ಚೆಯಾಗಲಿ. ಚರ್ಚೆ ಹಾಗೂ ಸಂವಾದಗಳಿಂದ ಚಿಕ್ಕಮಕ್ಕಳ ಕಾಯಿಲೆಗಳಿಗೆ ಅಗತ್ಯದ ಚಿಕಿತ್ಸಾ ವಿಧಾನಗಳು ಬೆಳಕಿಗೆ ಬರಲಿ’ ಎಂದು ಹೇಳಿದರು.

ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳ ಸುಮಾರು 200 ಚಿಕ್ಕಮಕ್ಕಳ ತಜ್ಞರು, ಚಿಕ್ಕಮಕ್ಕಳ ನರರೋಗ ತಜ್ಞರು, ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಚಿಕ್ಕಮಕ್ಕಳ ನರರೋಗಗಳ ಕುರಿತು ಸಮ್ಮೇಳನದಲ್ಲಿ ಸಂಶೋಧನಾ ಲೇಖನಗಳನ್ನು ಮಂಡಿಸಲಾಯಿತಲ್ಲದೇ, ಪರಿಣಿತರು ಉಪನ್ಯಾಸ ನೀಡಿದರು. ವಿವಿಧ ಕಂಪನಿಗಳ ವೈದ್ಯಕೀಯ ಉಪಕರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಹಾಕಲಾಗಿತ್ತು.

ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಕರ್ನಾಟಕ ಅಕಾಡೆಮಿ ಆಫ್ ಪಿಡಿಯಾಟ್ರಿಕ್ ನ್ಯೂರಾಲಜಿಯ ಕಾರ್ಯದರ್ಶಿ ಡಾ.ಕಿಶೋರ ಕೋಥಾ, ಸಮ್ಮೇಳನ ಕಾರ್ಯಾಧ್ಯಕ್ಷ ಡಾ.ಅಶೋಕ ಬಡಕಲಿ ಮತ್ತು ಡಾ.ಕೆಲುಡೆಪ್ಪಾ ತಳವಾರ, ಕಾರ್ಯದರ್ಶಿ ಡಾ.ರಮೇಶ ಪೋಳ, ಡಾ.ಶ್ರೀಕಾಂತ ಅರಷಿನಗೋಡಿ, ಡಾ.ರಮೇಶ ಪತ್ತಾರ ಇದ್ದರು.

ವಿಷಯದ ಬೆಳವಣಿಗೆಗೆ ಅನುಗುಣವಾಗಿ ತಜ್ಞರ ಸಂಖ್ಯೆ ಕೂಡ ಹೆಚ್ಚಿದೆ. ನರರೋಗ ಶಾಸ್ತ್ರದಲ್ಲಿ ಈಗ ಹೆಚ್ಚಿನ ಸಂಶೋಧನೆಗಳು ಸಹ ಆಗುತ್ತಿವೆ. ಇದರ ಪರಿಣಾಮ ನರರೋಗ ಕಾಯಿಲೆಗೆ ಚಿಕಿತ್ಸೆಯ ಹೊಸ ಹೊಸ ವಿಧಾನಗಳು ಬೆಳಕಿಗೆ ಬರುತ್ತಿವೆ.
-ಡಾ.ಸುರೇಶರಾವ್ ಅರೂರ್ ಬೆಂಗಳೂರಿನ ಚಿಕ್ಕಮಕ್ಕಳ ನರರೋಗ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.