ಮಹಾಲಿಂಗಪುರ (ಬಾಗಲಕೋಟೆ ಜಿಲ್ಲೆ) : ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುವ ಯುವಕ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಸಮೀಪದ ರನ್ನಬೆಳಗಲಿ ಪಟ್ಟಣ ಪಂಚಾಯ್ತಿ 17ನೇ ವಾರ್ಡ್ನಿಂದ ಪೆಟ್ರೋಲ್ ಬಂಕ್ ನೌಕರ ನೀಲಕಂಠ (ಕಾಂತು) ತಮ್ಮಣಪ್ಪ ಸೈದಾಪುರ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಅವರು ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿಯನ್ನು 72 ಮತಗಳಿಂದ ಸೋಲಿಸಿದ್ದಾರೆ.
ಸಾಮಾನ್ಯ ಮೀಸಲಾತಿ ಹೊಂದಿರುವ ಇಲ್ಲಿ 10ಕ್ಕೂ ಹೆಚ್ಚು ಆಕಾಂಕ್ಷಿಗಳ ನಡುವೆ ಪಕ್ಷದ ಮುಖಂಡರು ನೀಲಕಂಠ ಅವರಿಗೆ ಬಿ ಫಾರಂ ನೀಡಿದ್ದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಅಭಿಮಾನಿ ಆಗಿರುವ ನೀಲಕಂಠ ಪಟ್ಟಣದಲ್ಲಿ ನಡೆಯುವ ಹಬ್ಬ ಹರಿದಿನ, ಜಾತ್ರೆ ಉತ್ಸವಗಳಲ್ಲಿ ಮುಂಚೂಣಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದರು.
ಇದು ಅವರಿಗೆ ಟಿಕೆಟ್ ಪಡೆಯಲು ನೆರವಾಯಿತು.
ನೀಲಕಂಠ ಅವರ ಕುಟುಂಬಕ್ಕೆ ಒಂದು ಎಕರೆ ಜಮೀನು ಇದೆ. ತಂದೆ ತೋಟದಲ್ಲಿ ಕೂಲಿ ಕೆಲಸ ಹಾಗೂ ಸಹೋದರ ಗೌಂಡಿ ಆಗಿ ದುಡಿಯುತ್ತಾರೆ. ಆರ್ಥಿಕ ಸಂಕಷ್ಟದ ಕಾರಣ ಬಿಎ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿರುವ ನೀಲಕಂಠ ಎಂಟು ವರ್ಷಗಳಿಂದ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.