ಬಾಗಲಕೋಟೆ: ದಿನದ 24 ಗಂಟೆ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಕುಟುಂಬ ಸಲಹುತ್ತಾ ದೇಶಕ್ಕಾಗಿ ಪ್ರಾಣ ಮುಡುಪಾಗಿಟ್ಟವರು ಪೊಲೀಸರು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ನವನಗರದ ಪೊಲೀಸ್ ಹುತಾತ್ಮರ ಪರೇಡ್ ಮೈದಾನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಜಿಲ್ಲಾ ನ್ಯಾಯಾಧೀಶನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಥಮ ವರ್ಷದಲ್ಲಿ ಕೋಲಾರದಲ್ಲಿ ಪೊಲೀಸ್ ಹುತಾತ್ಮ ದಿನದ ಅತಿಥಿಯಾಗಿ ಭಾಗವಹಿಸುತ್ತಿರುವ ಎರಡು ದಿನಗಳ ಹಿಂದೆ ಕಳ್ಳನೊಬ್ಬನನ್ನು ಹಿಡಿಯಲು ಹೋದ ಪೊಲೀಸ್ ಸಬ್ಇನ್ಸ್ಪೆಕ್ಟರ್ ದಾರಿಯಲ್ಲಿ ಹುತಾತ್ಮರಾಗಿದ್ದ ಘಟನೆ ನನ್ನ ಜೀವನದಲ್ಲಿ ಮರೆಯಲಾಗದ ಪ್ರಸಂಗವಾಗಿದೆ’ ಎಂದರು.
‘ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವ ವೇಳೆ ನಿಧನ ಹೊಂದಿದರೆ ಅವರ ಕುಟುಂಬಗಳು ಸದಾ ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ಬರುತ್ತದೆ. ಇಂದು ಅಂತಹ ಕುಟುಂಬಗಳು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಮನ ಕಲಕುವಂತಾಗಿದೆ. ಪೊಲೀಸರ ಜೊತೆ ನಾವಿದ್ದೇವೆ ಎಂಬ ಧೈರ್ಯವನ್ನು ಅಂತಹ ಕುಟುಂಬದವರಿಗೆ ಕೊಡುವುದು ಅಗತ್ಯವಾಗಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಲಾಖೆಯಲ್ಲಿ ಎಎಒ, ಡಿಪಿಒ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಮೃತಪಟ್ಟ ಎನ್.ವಿ.ಬೇವಿನಕಟ್ಟಿ ಅವರ ಕುಟುಂಬಕ್ಕೆ ಪೊಲೀಸ್ ಪ್ಯಾಕೇಜ ಅಡಿಯಲ್ಲಿ ಬ್ಯಾಂಕ್ ಆಫ್ ಬರೋಡಾದವರು ನೀಡಿದ ₹ 10 ಲಕ್ಷ ಚೆಕ್ ಅನ್ನು ಮೃತರ ಪತ್ನಿ ಪೂಜಾ ನೀಲೇಶ ಬೇವಿನಕಟ್ಟಿ ಅವರಿಗೆ ವಿತರಿಸಲಾಯಿತು.
ಗಣ್ಯರು, ಹುತಾತ್ಮರಾದ ಪೊಲೀಸ್ ಕುಟುಂಬಗಳ ಸದಸ್ಯರು, ರೈತರು, ಪತ್ರಕರ್ತರು ಮತ್ತು ಪೊಲೀಸ್ ಅಧಿಕಾರಿಗಳು ಹುತಾತ್ಮ ಸ್ಮಾರಕಕ್ಕೆ ಪುಸ್ಪಗುಚ್ಚ ಅರ್ಪಿಸಿ ಗೌರವ ನಮನ ಸಲ್ಲಿಸಿದರು.
ಪರೇಡ್ ಕಮಾಂಡರ್ ಶಿವಾನಂದ ಜೇವರ್ಗಿ ನಾಯಕತ್ವದಲ್ಲಿ ಪರೇಡ್ ಮೂಲಕ ಗೌರವ ಸಲ್ಲಿಸಲಾಯಿತು. ಪೊಲೀಸ್ ಬ್ಯಾಂಡ್ ತಂಡ ಸುಮಧುರವಾಗಿ ವಾದ್ಯಗಳನ್ನು ನುಡಿಸಿತು. 2ನೇ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ, ಇತರರು ಇದ್ದರು.
ಹುತಾತ್ಮ ಪೊಲೀಸರ ಸ್ಮರಣೆ ಎಲ್ಲರ ಕರ್ತವ್ಯ
1959ರಲ್ಲಿ ಲಡಾಕ್ನ ಎತ್ತರ ಭಾಗದಲ್ಲಿ ಚೀನಿಯ ಪೊಲೀಸರು ಮೋಸದಿಂದ ಭಾರತೀಯ 10 ಜನ ಪೊಲೀಸರನ್ನು ಬಲಿ ತೆಗೆದುಕೊಂಡ ದಿನವನ್ನು ಪೊಲೀಸ್ ಹುತಾತ್ಮರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು ಈ ದಿನದಂದು ಹುತಾತ್ಮ ಪೊಲೀಸ್ ಸಿಬ್ಬಂದಿಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರಡ್ಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.