ರಬಕವಿ– ಬನಹಟ್ಟಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಮಳೆ ಹಿನ್ನೆಲೆ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರು ಬಿಟ್ಟಿದ್ದು, ಕೃಷ್ಣಾ ನಂದಿ ತುಂಬಿ ಹರಿಯುತ್ತಿದೆ. ಇದರಿಂದಾಗಿ ನದಿ ತೀರದ ಗ್ರಾಮಗಳಿಗೆ ನೀರು ನುಗ್ಗುತ್ತಿದೆ.
ರಬಕವಿ–ಬನಹಟ್ಟಿ ಜಾಕ್ವೆಲ್ಗಳಿಗೆ ಹೋಗುವ ಮಾರ್ಗ ನದಿ ನೀರಿನಿಂದ ಬಂದ್ ಆಗಿದ್ದು, ಸುತ್ತಲಿನ ಗ್ರಾಮ, ಪಟ್ಟಣಗಳಿಗೆ ನೀರು ಸರಬರಾಜು ಮಾಡಲು ಸಮಸ್ಯೆ ಉಂಟಾಗಿದೆ. ಅಲ್ಲದೆ, ನದಿ ನೀರಿನಲ್ಲಿ ಜಾಕ್ವೆಲ್ ಸುತ್ತಲಿನ ಬೆಳೆಗಳು ಮುಳುಗಡೆ ಆಗಿವೆ.
ಹೆಚ್ಚಿದ ಒಳಹರಿವು: ಸಮೀಪದ ಹಿಪ್ಪರಗಿ ಜಲಾಶಯದಲ್ಲಿ ಶನಿವಾರ ಬೆಳಿಗ್ಗೆ 2,28,056 ಕ್ಯೂಸೆಕ್ ಒಳ ಹರಿವು ಇದ್ದು, ಅಷ್ಟೆ ಪ್ರಮಾಣದ ಹೊರ ಹರಿವು ಕೂಡ ದಾಖಲಾಗಿದೆ.
‘ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಾದ ಕೊಯ್ನಾದಲ್ಲಿ 9. 3 ಸೆಂ.ಮೀ, ನವುಜಾ– 10.6 ಸೆಂ.ಮೀ, ಮಹಾಬಳೇಶ್ವರ– 18.2 ಸೆಂ.ಮೀ, ಉಮದಿ– 16.2 ಸೆಂ,ಮೀ, ತರಾಳಿ– 16.2 ಸೆಂ.ಮೀ, ರಾಧಾ ನಗರಿ– 18 ಸೆಂ.ಮೀ, ದೂಧಗಂಗಾದಲ್ಲಿ 15 ಸೆಂ.ಮೀ ಮಳೆಯಾದ ವರದಿಯಾಗಿದ್ದು, ಅದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಕೃಷ್ಣಾ ನದಿಗೆ ಹರಿದುಬಂದಿದೆ’ ಎಂದು ರಬಕವಿ–ಬನಹಟ್ಟಿ ತಹಶೀಲ್ಧಾರ್ ಗಿರೀಶ ಸ್ವಾದಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.