ರಾಂಪುರ: ಸಮೀಪದ ಶಿರೂರ ಪಟ್ಟಣದಲ್ಲಿ ಸೋಮವಾರ ಬನಶಂಕರಿದೇವಿ ನೂತನ ಮೂರ್ತಿಯ ಮೆರವಣಿಗೆ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆ 9ಕ್ಕೆ ಸ್ಥಳೀಯ ಸಿದ್ಧೇಶ್ವರ ಪ್ರೌಢಶಾಲೆಯ ಆವರಣದಿಂದ ಹೊರಟ ಬನಶಂಕರಿದೇವಿ ಮೂರ್ತಿಯ ಮೆರವಣಿಗೆಗೆ ಶಿವಯೋಗಾಶ್ರಮದ ಸಿದ್ಧಲಿಂಗ ಸ್ವಾಮೀಜಿ ಹಾಗೂ ಗುಳೇದಗುಡ್ಡದ ದೇವಾಂಗಮಠದ ಚಿದಾನಂದ ಸ್ವಾಮೀಜಿ ಚಾಲನೆ ನೀಡಿದರು.
ಅಲ್ಲಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ನೇಕಾರ ಪೇಟೆಯಲ್ಲಿರುವ ಬನಶಂಕರಿ ದೇವಸ್ಥಾನಕ್ಕೆ ತಲುಪಿತು. ನವದುರ್ಗಿಯರು, ಗಣಪತಿ, ಸರಸ್ವತಿ, ಲಕ್ಷ್ಮೀದೇವಿ ವೇಷ ಭೂಷಣ ತೊಟ್ಟ ಮಕ್ಕಳು ಮೆರವಣಿಗೆಯಲ್ಲಿ ಗಮನ ಸೆಳೆದರು.
ಕುಂಭ ಹೊತ್ತ ಹಾಗೂ ಕಳಸಾರತಿ ಹಿಡಿದು ಸಾಗಿದ 350 ಕ್ಕೂ ಹೆಚ್ಚು ಮಹಿಳೆಯರು, ಭಟ್ಕಳದ ಚಂಡೆ ವಾದ್ಯ, ಮುದ್ದೇಬಿಹಾಳ ತಾಲ್ಲೂಕಿನ ಗಣಿಯ ಗೊಂಬೆಗಳ ಕುಣಿತ, ಸ್ಥಳೀಯ ಡೊಳ್ಳು ಮೇಳಗಳು ಮೆರವಣಿಗೆಗೆ ಕಳೆ ತಂದವು.
ದೇವಾಂಗ ಸಮಾಜ, ಬನಶಂಕರಿದೇವಿ ಜೀರ್ಣೊದ್ಧಾರ ಸಮಿತಿ, ಸಿದ್ಧಲಿಂಗೇಶ್ವರ ನೇಕಾರ ಸಹಕಾರ ಸಂಘದ ಸಹಯೋಗದಲ್ಲಿ ನಡೆದ ಮೆರವಣಿಗೆಯಲ್ಲಿ ದೇವಾಂಗ ಸಮಾಜದ ಅಧ್ಯಕ್ಷ ಕಾಶಪ್ಪಗೌಡ ಪ್ಯಾಟಿಗೌಡ್ರ, ಪ್ರಮುಖರಾದ ಅಮಾತೆಪ್ಪ ಕೊಪ್ಪಳ, ಚಂದ್ರಕಾಂತ ಶೇಖಾ, ಗೋಪಾಲ ವನಕಿ, ಸಿದ್ದಪ್ಪ ಕೋಟಿಕಲ್, ಸುರೇಶ ದೇಸಾಯಿ, ರಂಗಪ್ಪ ಮಳ್ಳಿ, ರಾಜಶೇಖರ ಅಂಗಡಿ, ಅರ್ಜುನ ಅಂಗಡಿ, ಸಿದ್ದಪ್ಪ ಗಾಳಿ, ಕಲ್ಲಪ್ಪ ಭಗವತಿ, ಲಕ್ಷ್ಮಣ ಬದಾಮಿ ಸೇರಿ ನೇಕಾರ ಸಮಾಜದ ಮುಖಂಡರು, ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.