
ರಬಕವಿ ಬನಹಟ್ಟಿ: ‘ಎಂ.ಎಸ್.ಬದಾಮಿ ಅವರು ರಚಿಸಿದ ‘ರತನ್ ಟಾಟಾ’, ‘ಬದುಕು ಮತ್ತು ಬೆವರು’ ಕೃತಿಗಳು ಇತರರಿಗೆ ಮಾದರಿಯಾಗಿವೆ’ ಎಂದು ರಬಕವಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ನುಡಿದರು.
ಇಲ್ಲಿನ ಬನಶಂಕರಿ ದೇವಸ್ಥಾನದ ಸಭಾ ಭವನದಲ್ಲಿ ಭಾನುವಾರ ನಡೆದ ಎಂ.ಎಸ್.ಬದಾಮಿ ರಚಿಸಿದ ‘ರತನ್ ಟಾಟಾ’, ‘ಬದುಕು ಮತ್ತು ಬೆವರು’ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಉದ್ಯಮ ಕ್ಷೇತ್ರ ಮತ್ತು ಸಾಮಾಜಿಕ ಸೇವೆಯಲ್ಲಿ ರತನ್ ಟಾಟಾ ಅವರು ದೇಶಕ್ಕೆ ನೀಡಿದ ಕೊಡುಗೆ ಶ್ಲಾಘನೀಯ. ಸಂತರಂತೆ ಸರಳವಾಗಿ ಮತ್ತು ಕಷ್ಟಗಳನ್ನು ಎದುರಿಸಿ ಬದುಕಿದವರು. ಅವರ ಬದುಕು ಪ್ರತಿಯೊಬ್ಬರಿಗೆ ಮಾದರಿ’ ಎಂದು ತಿಳಿಸಿದರು.
ನಿರಾಣಿ ಸಮೂಹ ಸಂಸ್ಥೆಯ ಕಾರ್ಯ ನಿರ್ವಾಹಕ ಸಂಗಮೇಶ ನಿರಾಣಿ ಮಾತನಾಡಿ, ‘ಟಾಟಾ ಅವರು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ನೀಡಿದವರು. ನಾಡಿನ ಹಿತ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರು, ದೇಶದ ಸಾಮಾನ್ಯ ಕುಟುಂಬಗಳಿಗೆ ಆಧಾರವಾಗಿದ್ದವರು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.
ತೇರದಾಳದ ಎಸ್.ಡಿ.ಎಂ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಮಹಾವೀರ ದಾನಿಗೊಂಡ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.
ಸಾಹಿತಿ ಶಿವಾನಂದ ದಾಶ್ಯಾಳ ಕೃತಿಗಳ ಕುರಿತು ಮತ್ತು ಕಸಾಪ ಅಧ್ಯಕ್ಷ ಮ.ಕೃ.ಮೇಗಾಡಿ, ಕೃತಿಕಾರ ಎಂ.ಎಸ್.ಬದಾಮಿ ಮಾತನಾಡಿದರು.
ಬೆಳಗಾವಿಯ ಡಾ. ಶ್ರೀಪತಿ ಪಿಸ್ಸೆ ಮತ್ತು ಬೆಳಗಾವಿಯ ಡಿವೈಎಸ್ಪಿ ಬಿ.ಎಸ್.ಲೋಕಾಪುರ ಅವರನ್ನು ಸನ್ಮಾನಿಸಲಾಯಿತು.
ಮಲ್ಲಿಕಾರ್ಜುನ ನಾಶಿ, ಬಸವರಾಜ ತೆಗ್ಗಿ, ಡಾ.ಜಿ.ಎಚ್.ಚಿತ್ತರಗಿ, ಬಸವರಾಜ ಕೊಣ್ಣೂರ, ಭೀಮಶಿ ಮಗದುಮ್, ರಾಜೇಶ ನೋಟದ, ಮಲ್ಲೇಶಪ್ಪ ಕುಚನೂರ, ಬಸವರಾಜ ದೊಂಬಾಳೆ, ವಜ್ರಕಾಂತ ಕಮತಗಿ, ಮಹಾದೇವ ಕವಿಶೆಟ್ಟಿ ಇದ್ದರು.
ಪುಸ್ತಕಗಳ ಪರಿಚಯ
ಕೃತಿ: ಬದುಕು ಮತ್ತು ಬೆವರು
ಲೇಖಕ: ಎಂ.ಎಸ್.ಬದಾಮಿ
ಪ್ರಕಾಶಕರು: ರಾಜೇಶ್ವರಿ ಪ್ರಕಾಶನ ಮಹಾಲಿಂಗಪುರ
ಬೆಲೆ: ₹200
ಕೃತಿ: ರತನ್ ಟಾಟಾ ಲೇಖಕ: ಎಂ.ಎಸ್.ಬದಾಮಿ. ಪ್ರಕಾಶಕರು: ಚಾಣಕ್ಯ ಪ್ರಕಾಶನ ವಿಜಯಪುರ.
ಬೆಲೆ: ₹195
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.