ಮುಧೋಳ: ‘ಸರ್ವಧರ್ಮಿಯರನ್ನು ಆತ್ಮೀಯತೆಯಿಂದ ಕಾಣಬೇಕು. ಎಲ್ಲ ಧರ್ಮಿಯರನ್ನು ಪ್ರೀತಿಸುವುದರ ಜೊತೆಗೆ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಸ್ಥಳೀಯ ಈದ್ದಾ ಮೈದಾನದಲ್ಲಿ ಬಕ್ರೀದ್ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮಾತನಾಡಿದ ಅವರು, ‘ಅಲ್ಲಾಹು ಸರ್ವರಿಗೂ ಜಗತ್ತಿನಲ್ಲಿ ಸುಖ, ಶಾಂತಿ, ನೆಮ್ಮದಿ ಕೊಟ್ಟು ಕಾಪಾಡಲಿ’ ಎಂದರು.
ಅಂಜುಮನ್-ಏ-ಇಸ್ಲಾಂ ಕಮಿಟಿ ಸದಸ್ಯರು ಹಾಗೂ ಹಿರಿಯ ವಕೀಲ ಐ.ಎಚ್.ಅಂಬಿ ಮಾತನಾಡಿ, ‘ತ್ಯಾಗ, ಬಲಿದಾನದ ಬಕ್ರೀದ್ ಅನ್ನು ಎಲ್ಲರೂ ಭಕ್ತಿಯಿಂದ ಆಚರಿಸೋಣ. ಪ್ರವಾದಿ ಮಹಮ್ಮದರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಜೀವನ ಸಾಗಿಸಿದರೆ ಜಗತ್ತಿನಲ್ಲಿ ಮತ್ತು ಮರಣಾ ನಂತರ ಜೀವನದಲ್ಲಿ ಯಶಸ್ವಿ ಆಗುತ್ತೇವೆ’ ಎಂದರು.
ಇದಕ್ಕೂ ಮುನ್ನ ಬೆಳಿಗ್ಗೆ 8 ಗಂಟೆಗೆ ನಗರದ ಗಾಂಧಿ ಸರ್ಕಲ್ನ ಶಾಯಿ ಮಸೀದಿಯಿಂದ ಮೇನ್ ಬಜಾರ ಮಾರ್ಗವಾಗಿ ಮುಸ್ಲಿಮರು ಬೃಹತ್ ಮೆರವಣಿಗೆ ಮೂಲಕ ಹೊರ ವಲಯದ ಈದ್ಗಾ ಮೈದಾನಕ್ಕೆ ತಲುಪಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮೌಲಾನಾಗಳಾದ ಇಕ್ಬಾಲ್ ನಗಾರ್ಚಿ, ಜಮೀರ ಇನಾಮದಾರ, ಪ್ರಾರ್ಥನೆ ನೇತೃತ್ವ ವಹಿಸಿದ್ದರು.
ಕಮಿಟಿ ಅಧ್ಯಕ್ಷ ಆರೀಫ್ ಮೋಮಿನ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಕಾಂಗ್ರೆಸ್ ಮುಖಂಡ ಸದುಗೌಡ ಪಾಟೀಲ, ಮುಖಂಡರಾದ ಎನ್. ಬಿ.ಹುಬ್ಬಳಿ, ಬಾಷ ರಾಮದುರ್ಗ, ನಬಿ ಉಸ್ತಾದ, ಯುನ್ನೂಸ ಹುಲಕುಂದ, ಯುಸುಫ್ ಜಮಾದಾರ, ರಾಜು ಬಾಗವಾನ, ಯುಸುಫ್ ಚಾಂದ, ಬಾಷ ಕೌಜಲಗಿ, ನಬಿ ಜಾಗಿರದಾರ, ನಜೀರ ಪಠಾಣ ಸೇರಿದಂತೆ ಮುಧೋಳ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳು, ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.