ADVERTISEMENT

ಹುನಗುಂದ | ಒಳ ಮೀಸಲಾತಿಯಲ್ಲಿ ಕೊರಮ ಸಮಾಜಕ್ಕೆ ಅನ್ಯಾಯ: ವೃಷಭೇಂದ್ರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 4:16 IST
Last Updated 5 ಸೆಪ್ಟೆಂಬರ್ 2025, 4:16 IST
ಹುನಗುಂದದ ಬಸವ ಮಂಟಪದಲ್ಲಿ ಹುನಗುಂದ ಮತ್ತು ಇಳಕಲ್ ತಾಲ್ಲೂಕು ಕೊರಮ ಸಮಾಜದ ವತಿಯಿಂದ ನಡೆದ ಶಿವಶರಣ ನೂಲಿಯ ಚಂದಯ್ಯ ಅವರ 918ನೇ ಜಯಂತಿ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ಹುನಗುಂದದ ಬಸವ ಮಂಟಪದಲ್ಲಿ ಹುನಗುಂದ ಮತ್ತು ಇಳಕಲ್ ತಾಲ್ಲೂಕು ಕೊರಮ ಸಮಾಜದ ವತಿಯಿಂದ ನಡೆದ ಶಿವಶರಣ ನೂಲಿಯ ಚಂದಯ್ಯ ಅವರ 918ನೇ ಜಯಂತಿ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು   

ಹುನಗುಂದ: ನಮ್ಮದು ಶೋಷಿತ ಸಮಾಜ. ಒಳ ಮೀಸಲಾತಿಯಲ್ಲಿ ಸಮಾಜಕ್ಕೆ ಅನ್ಯಾಯವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಹೋರಾಡಿ ನ್ಯಾಯ ಪಡೆಯಬೇಕಾಗಿದೆ ಎಂದು ನಂದಿಕ್ಷೇತ್ರ ಮತ್ತು ಶಿವಣಗಿ ನೂಲಿಯ ಚಂದಯ್ಯಪೀಠದ ವೃಷಭೇಂದ್ರ ಸ್ವಾಮೀಜಿ ಹೇಳಿದರು.

ಗುರುವಾರ ಪಟ್ಟಣದ ಬಸವ ಮಂಟಪದಲ್ಲಿ ಹುನಗುಂದ ಮತ್ತು ಇಳಕಲ್ ತಾಲ್ಲೂಕು ಕೊರಮ ಸಮಾಜದ ವತಿಯಿಂದ ನಡೆದ ಕಾಯಕಯೋಗಿ ಶಿವಶರಣ ನೂಲಿಯ ಚಂದಯ್ಯ ಅವರ 918ನೇ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸಮುದಾಯ ಶಿಕ್ಷಣ ಪಡೆದು ಸಂಘಟಿತರಾಗಿ ರಾಜಕೀಯ ಪ್ರಜ್ಞೆ ಮೂಡಲಿ. ಕೊರಮ ಸಮುದಾಯದ ವೀರಶೈವ ಒಳಪಂಗಡಗಳಲ್ಲಿ ಒಂದಾಗಿದ್ದು, ವೀರಶೈವ ನಿಗಮ ಮಂಡಳಿಯಿಂದ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ. ಸಮುದಾಯದ ಪ್ರಮುಖ ಬೇಡಿಕೆ ಭವನ ನಿರ್ಮಾಣಕ್ಕೆ ₹50 ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ADVERTISEMENT

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ನೂಲಿಯ ಚಂದಯ್ಯನವರು ಬಸವಣ್ಣನವರ ಅನುಯಾಯಯಾಗಿ ಕಾಯಕ ಮತ್ತು ದಾಸೋಹ ತತ್ವದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು. ಕೆಲೂರು ಪ್ರೌಢಶಾಲೆಯ ಶಿಕ್ಷಕ ತಮ್ಮಣ್ಣೆಪ್ಪ ಭಜಂತ್ರಿ ಉಪನ್ಯಾಸ ನೀಡಿದರು. ಕೊರಮ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಭಜಂತ್ರಿ, ಶ್ರೀದೇವಿ ಉತ್ಲಾಸರ್, ಕೊರಮ ಸಮಾಜದ ತಾಲ್ಲೂಕು ಅಧ್ಯಕ್ಷ ಸಂಗಪ್ಪ ಭಜಂತ್ರಿ, ನೀಲಕಂಠಪ್ಪ ಭಜಂತ್ರಿ, ಬಸಪ್ಪ ಹುನಕುಂಟಿ, ಬಾಯಕ್ಕ ಮೇಟಿ ಮಾತನಾಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶರಣ ನೂಲಿಯ ಚಂದಯ್ಯನವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

ಎಸ್ಎಸ್ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು. ಸಿದ್ದನಕೊಳ್ಳದ ಶಿವಕುಮಾರ ಸ್ವಾಮೀಜಿ , ಇಳಕಲ್ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ವಿಜಯ ಗದ್ದನಕೇರಿ, ಇಳಕಲ್ ತಾಲ್ಲೂಕು ಕೊರಮ ಸಮಾಜದ ಅಧ್ಯಕ್ಷ ತುಕಾರಾಂ ಭಜಂತ್ರಿ, ಮಹಾಂತೇಶ ಭಜಂತ್ರಿ, ಬಾಬು ಭಜಂತ್ರಿ, ಬಸಪ್ಪ ಭಜಂತ್ರಿ, ರಾಜಕುಮಾರ ಬಾದವಾಡಗಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.