ADVERTISEMENT

ರೋಹಿಣಿ ಮಳೆ ಆರ್ಭಟ: ತಂಪಾದ ಇಳೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 14:47 IST
Last Updated 3 ಜೂನ್ 2021, 14:47 IST

ಬಾಗಲಕೋಟೆ: ರೋಹಿಣಿ ಮಳೆಯಾದರೆ ಓಣಿ ತುಂಬಾ ಜ್ವಾಳ ಎಂಬ ಜಿಲ್ಲೆಯ ರೈತಾಪಿ ವರ್ಗದ ಆಶಯಕ್ಕೆ ಗುರುವಾರ ಸಂಜೆ ಮಳೆರಾಯ ಇಂಬು ನೀಡಿದ.

ತುಸು ತಡವಾದರೂ ರೋಹಿಣಿ ಮಳೆಯ ಆರ್ಭಟಕ್ಕೆ ಬಾಗಲಕೋಟೆ ನಗರ ತತ್ತರಿಸಿತು. ಗುಡುಗು-ಸಿಡಿಲು, ಗಾಳಿಯ ಜುಗಲ್ಬಂದಿ ಮುಂಗಾರು ಹಂಗಾಮಿಗೆ ಮುನ್ನುಡಿ ಬರೆಯಿತು. ಇನ್ನು ಬಿತ್ತನೆ ಚಟುವಟಿಕೆಗೆ ಜೀವ ಕೊಡಬಹುದು ಎಂದು ರೈತರು ನಿಟ್ಟುಸಿರು ಬಿಟ್ಟರು.

ಸಂಜೆ 5.30ರ ವೇಳೆಗೆ ಆರಂಭವಾದ ಮಳೆ ಆರ್ಭಟಿಸಿತು. ಮಳೆಯ ಆರ್ಭಟಕ್ಕೆ ಮುಂಜಾನೆಯಿಂದಲೇ ಬಿರು ಬಿಸಿಲು ಹಾಗೂ ಸೆಕೆಯ ವಾತಾವರಣ ಮುನ್ನುಡಿ ಬರೆದಿದ್ದೆವು. ಸಂಜೆಯಾಗುತ್ತಲೇ ಕಪ್ಪು ಮೋಡಗಳು ಇಳೆಯತ್ತ ಜಾರುತ್ತಿವೆಯೇ ಎಂಬ ಭಾವನೆ ಒಡಮೂಡಿತ್ತು. ನಂತರದ್ದು ಮಾತ್ರ ಮಳೆಯ ಹಂಗಾಮ.

ಆಗಾಗ ಗುಡುಗು,‌ಮಿಂಚು ಬಂದು ಹೋದರೂ ಮಳೆಯದ್ದೇ ಆರ್ಭಟ ನಡೆಯಿತು.

ADVERTISEMENT

ಮಳೆ ಆರಂಭವಾಗುತ್ತಿದ್ದಂತೆಯೇ ಎಂದಿನಂತೆಯೇ ವಿದ್ಯುತ್ ಕಡಿತಗೊಂಡು ಇಡೀ ನಗರ ಕತ್ತಲೆಯಲ್ಲಿ ಮುಳುಗಿತ್ತು. ಮಳೆ ನಿಂತ ನಂತರವೂ ನಗರದ ಜನರಿಗೆ ಮನೆಯೊಳಗೆ ಕತ್ತಲೆಯ ವಾಸ ಮುಂದುವರೆದಿತ್ತು.

ಹೊರಗೆ ಮಾತ್ರ ಬಿರುಬಿಸಿಲಿನ ಧಗೆಗೆ ಬಾಯಾರಿದ್ದ ಇಳೆಗೆ ಮಳೆಯ ಸಿಂಚನ ಹರ್ಷ ಭಾವ ತಂದಿತ್ತು. ಎಲ್ಲೆಡೆಯೂ ಮಣ್ಣಿನ ಘಮಲು ಹರಡಿತ್ತು. ಕೋವಿಡ್ ನ ಸಂಕಷ್ಟದ ನಡುವೆ ಮಳೆ ಮನೆ ಮನೆಗಳಲ್ಲಿ ತಂಪಿನ ಭಾವ ಮೂಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.