ಬಾಗಲಕೋಟೆ: ಇಳಕಲ್ನಲ್ಲಿ ಜನವರಿ 4 ಮತ್ತು 5 ರಂದು ನಡೆಯಲಿರುವ ಎಂಟನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಪ್ರೊ.ಜಿ.ಎಚ್.ಹನ್ನೆರಡುಮಠ ಅವರನ್ನು ಆಯ್ಕೆ ಮಾಡಲಾಗಿದೆ.
ನವನಗರದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಬುಧವಾರ ಜರುಗಿದ ಕಾರ್ಯಕಾರಿ ಸಮಿತಿಯಲ್ಲಿ ಈ ಆಯ್ಕೆ ಮಾಡಲಾಗಿದೆ ಎಂದು ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ತಿಳಿಸಿದ್ದಾರೆ.
ಜಿ.ಎಚ್.ಹನ್ನೆರಡುಮಠ ಅವರು ಇಳಕಲ್ನ ಶ್ರೀ ವಿಜಯ ಮಹಾಂತೇಶ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ 30 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಜಗದ್ಗುರು ಮೂರುಸಾವಿರ ಮಠದ ಪ್ರಕಾಶನದ 600 ಪುಸ್ತಕಗಳ ಪ್ರಕಟಣೆಯಲ್ಲಿ ಸಮಗ್ರ ಯೋಜನೆ ಸಿದ್ದಪಡಿಸಿದ್ದಾರೆ.
ಸಾಹಿತ್ಯ, ಸಂಸ್ಕೃತಿ, ಧರ್ಮ, ಯೋಗ, ಶಿಕ್ಷಣ, ಕಲೆ ಕುರಿತು ದೆಹಲಿ, ಕೋಲ್ಕತ್ತಾ, ಅಬುಪರ್ವತ, ಡೆಹರಾಡೂನ್, ಚೆನ್ನೈನಲ್ಲಿ ಉಪನ್ಯಾಸ ನೀಡಿದ್ದಾರೆ.
17 ಕಾದಂಬರಿ, 13 ಕವನ ಸಂಕಲನ, 35 ನಾಟಕ, 10 ಕಥಾ ಸಂಕಲನ, ಮೂರು ವಿನೋದ ಸಾಹಿತ್ಯ, ನಾಲ್ಕು ಲಲಿತ ಪ್ರಬಂಧ, ಎರಡು ಪ್ರವಾಸ ಕಥನ, ಒಂದು ವಚನ ರಚನೆ, ಎಂಟು ಅಪ್ರಕಟಿತ ಬರಹಗಳು ಸೇರಿದಂತೆ ಒಟ್ಟು 110 ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲದೇ ಆರು ಚಲಚಿತ್ರಗಳಿಗೆ ಚಿತ್ರಕಥೆ ಬರೆದಿದ್ದಾರೆ. 11 ಧ್ವನಿ ಸುರಳಿ ಬಿಡುಗಡೆ ಮಾಡಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.