
ಮಕ್ಕಳು
ಬಾಗಲಕೋಟೆ: ಕಬ್ಬು ಕಟಾವು ಮಾಡಲು ಬಂದ ಉತ್ತರ ಪ್ರದೇಶ ರಾಜ್ಯದ 17 ಜನ ಕಾರ್ಮಿಕರು ಹಾಗೂ 19 ಮಕ್ಕಳನ್ನು ರಕ್ಷಣೆ ಮಾಡಿ, ಉತ್ತರ ಪ್ರದೇಶದ ಲಲಿತಪುರಕ್ಕೆ ಸುರಕ್ಷಿತವಾಗಿ ಕಳುಹಿಸಿ ಕೊಡಲಾಗಿದೆ.
ಬಾದಾಮಿ ತಾಲ್ಲೂಕಿನ ನೀರಲಗಿ ಗ್ರಾಮದಲ್ಲಿ ಉತ್ತರ ಪ್ರದೇಶ ರಾಜ್ಯದ ಕಾರ್ಮಿಕರು ಕಬ್ಬು ಕಟಾವು ಮಾಡಲು ಬಂದಿದ್ದು, ಸದರಿ ಕಾರ್ಮಿಕರಿಗೆ ವೇತನ ಪಾವತಿಸದೇ, ಸ್ವಂತ ಊರಿಗೆ ಹೋಗಲು ಬಿಡದ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯ ಜಿಲ್ಲಾಧಿಕಾರಿ ನೀಡಿದ ದೂರಿನ್ವಯ ಜಿಲ್ಲಾ ಕಾರ್ಮಿಕ ಅಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ಪರಿಶೀಲನೆ ಮಾಡಿತು.
ಕಾರ್ಮಿಕರ ಹೇಳಿಕೆ ಪಡೆದುಕೊಂಡು ಕಾರ್ಮಿಕರಿಗೆ ವೇತನ ನೀಡದೇ ಸತಾಯಿಸುತ್ತಿರುವ ಮಹಾರಾಷ್ಟ್ರದ ಗ್ಯಾಂಗ್ ಮನ್ ದೀಪಕ್ ಮೇಲೆ ಬಾದಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
17 ಕಾರ್ಮಿಕರು ಹಾಗೂ 19 ಮಕ್ಕಳನ್ನು ರಕ್ಷಣೆ ಮಾಡಿ ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಮುಂದೆ ಹಾಜರುಪಡಿಸಲಾಯಿತು. ನಂತರ 17 ಕಾರ್ಮಿಕರನ್ನು ವಿಚಾರಣೆ ನಡೆಸಿದ ಉಪವಿಭಾಗಾಧಿಕಾರಿ, ಎಲ್ಲ ಕಾರ್ಮಿಕರಿಗೆ ಬಿಡುಗಡೆ ಪ್ರಮಾಣಪತ್ರ ನೀಡಿ, ಅವರ ಊರಿಗೆ ಕಳುಹಿಸಲು ಸೂಚಿಸಿದರು.
ಜಿಲ್ಲೆಯ ಸಕ್ಕರೆ ಕಾರ್ಖಾನೆಯೊಂದಕ್ಕೆ ಕಬ್ಬಿನ ಗ್ಯಾಂಗ್ ಕರೆದುಕೊಂಡು ಬಂದಿದ್ದ ಮಹಾರಾಷ್ಟ್ರದ ಮಧ್ಯವರ್ತಿ ಕಾರ್ಮಿಕರಿಗೆ ಎರಡು ತಿಂಗಳಿಂದ ಪಗಾರ ನೀಡದೇ ಅವರಿಂದ ಪುಕ್ಕಟ್ಟೆ ಕೆಲಸ ಮಾಡಿಸಿಕೊಳ್ಳುತ್ತಿದ್ದ. ಈಗ ಅವರನ್ನು ರಕ್ಷಣೆ ಮಾಡಿ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.