
ಶಿವಯೋಗಮಂದಿರ (ಬಾದಾಮಿ): ‘ಶಿವಯೋಗಮಂದಿರ ಸಂಸ್ಥೆಯ ಬಗ್ಗೆ ಈಚೆಗೆ ಕೆಲವರು ಟೀಕೆಗಳನ್ನು ಮಾಡುತ್ತಿದ್ದಾರೆ. ಅದರೆ ಶಿವಯೋಗಮಂದಿರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ’ ಎಂದು ಶಿವಯೋಗಮಂದಿರ ಸಂಸ್ಥೆಯ ಉಪಾಧ್ಯಕ್ಷ, ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಶಿವಯೋಗಮಂದಿರದಲ್ಲಿ ಸೋಮವಾರ ಸದಾಶಿವ ಸ್ವಾಮೀಜಿ 42ನೇ ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ಅವರು ಇಲ್ಲಿ ಕೇವಲ ಗಿಡಗಂಟೆ ಇಲ್ಲ ಹಾನಗಲ್ ಕುಮಾರ ಸ್ವಾಮೀಜಿ ಮತ್ತು ಸದಾಶಿವ ಸ್ವಾಮೀಜಿಯವರ ತಪಸ್ಸಿನ ಶಕ್ತಿ ಭದ್ರಬುನಾದಿಯಾಗಿ ನಿಂತಿದೆ ಎಂದರು.
‘ಶಿವಯೋಗಮಂದಿರಲ್ಲಿ ಅಧ್ಯಯನ ಮಾಡಿದ ಸಾವಿರಾರು ಮಠಾಧೀಶರು ನಿಸ್ವಾರ್ಥ ಭಾವದಿಂದ ಅನ್ನ, ಅರಿವು ಮತ್ತು ಆಶ್ರಯ ನೀಡಿ ಸಮಾಜದ ಉನ್ನತಿಗಾಗಿ ಸದಾಕಾಲ ಶ್ರಮಿಸುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಮಠಾಧೀಶರು ಮರೆಯಬಾರದು’ ಎಂದು ಹೇಳಿದರು.
‘ಹಾನಗಲ್ ಕುಮಾರ ಸ್ವಾಮೀಜಿ ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಶಿವಯೋಗಮಂದಿರವನ್ನು ಸ್ಥಾಪಿಸಿ ವೀರಶೈವ ಲಿಂಗಾಯತರನ್ನು ಜಾಗೃತಿಗೊಳಿಸಿದರು. ಕುಮಾರ ಸ್ವಾಮೀಜಿ ನಂತರ ಸದಾಶಿವ ಸ್ವಾಮೀಜಿ ಐದು ದಶಕಗಳ ಕಾಲ ಶಿವಯೋಗಮಂದಿರ ಉನ್ನತಿಗೆ ಮತ್ತು ಸಮಾಜ ಸೇವೆಗೆ ಸಾವಿರಾರು ಮಠಾಧೀಶರನ್ನಾಗಿ ರೂಪಿಸಿದರು’ ಎಂದು ಹಂದಿಗುಂದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಿವಯೋಗಂಮದಿರ ಸಂಸ್ಥೆಗೆ ಶ್ರಮಿಸಿದ ಸದಾಶಿವ ಸ್ವಾಮೀಜಿ ಅವರ ಲಿಂಗಪೂಜೆ ಮತ್ತು ತಪಸ್ ಶಕ್ತಿಯ ಬಗ್ಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಮಾತನಾಡಿದರು.
ಚಿಕ್ಕ ರಥದಲ್ಲಿ ಸದಾಶಿವ ಸ್ವಾಮೀಜಿ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ಭಕ್ತರು, ವಾದ್ಯ ವೈಭವ ಮತ್ತು ಭಜನಾ ಮಂಡಳಿ ಕಲಾವಿದರಿಂದ ಮೆರವಣಿಗೆ ನಡೆಯಿತು.
ಶಾಂತವೀರ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಸಚ್ಚದಾನಂದ ಸ್ವಾಮೀಜಿ, ನಾಗಭೂಷಣ ಸ್ವಾಮೀಜಿ, ಗುಲಗಂಜಿಮಠ ಸ್ವಾಮೀಜಿ, ಅನ್ನದಾನ ಶಾಸ್ತ್ರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ.ಆರ್.ಸಿ. ಭಂಡಾರಿ, ಎಂ.ಬಿ. ಹಂಗರಗಿ, ಪಂಪಣ್ಣ ಕಾಚಟ್ಟಿ, ಕುಮಾರಗೌಡ ಜನಾಲಿ, ಮುಕ್ಕಣ್ಣ ಜನಾಲಿ, ಮಾನಗೌಡ ಜನಾಲಿ ಮತ್ತು ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.