ಸಿದ್ದರಾಮಯ್ಯ
ಬಾದಾಮಿ (ಬಾಗಲಕೋಟೆ): ‘ಚಾಮುಂಡೇಶ್ವರಿ ಕ್ಷೇತ್ರದವರು ನನ್ನನ್ನು ಸೋಲಿಸಿದ್ದರು. ಆದರೆ, ಬಾದಾಮಿ ಕ್ಷೇತ್ರದ ಜನ ಗೆಲ್ಲಿಸಿದ್ದರು. ಅದರಿಂದಲೇ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಇಲ್ಲಿ ಸ್ಮರಿಸಿದರು.
ಬಾದಾಮಿಯಲ್ಲಿ ಚಾಲುಕ್ಯ ಉತ್ಸವ ಉದ್ಘಾಟಿಸಿದ ಅವರು, ‘ನಿಮ್ಮ ಉಪಕಾರವನ್ನು ಎಂದಿಗೂ ಮರೆಯುವುದಿಲ್ಲ. ಚಾಲುಕ್ಯ ಉತ್ಸವ ನಡೆಯಲಿಲ್ಲ, ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಠಾಪನೆಯಾಗಲಿಲ್ಲ ಎಂಬ ಕೊರಗಿತ್ತು. ಈಗ ಅವೆರಡೂ ಈಡೇರಿವೆ’ ಎಂದರು.
ಅನುದಾನ ತರಲಿ: ‘ಎರಡೂವರೆ ವರ್ಷಗಳಲ್ಲಿ ಬಾದಾಮಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ₹2 ಸಾವಿರ ಕೋಟಿ ಅನುದಾನ ನೀಡಲಾಗಿದೆ. ವೇದಿಕೆ ಮೇಲೆ ಪ್ರತಿಪಕ್ಷದ ನಾಯಕರೂ ಇದ್ದಾರೆ. ಆದರೆ, ಇಲ್ಲಿ ರಾಜಕೀಯ ಮಾಡುವುದಿಲ್ಲ. ನಿಮ್ಮ ಕ್ಷೇತ್ರದ ಅಭಿವೃದ್ಧಿಗೂ ಅನುದಾನ ಕೊಡುವೆ. ನೀವೂ ಕೇಂದ್ರದಿಂದ ಅನುದಾನ ತರಲು ಕೈಜೋಡಿಸಿ’ ಎಂದು ಸಿದ್ದರಾಮಯ್ಯ ಹೇಳಿದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ‘ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರದಿಂದ ₹200 ಕೋಟಿ ಅನುದಾನ ತರುವೆ. ಎಲ್ಲರೂ ಸೇರಿ ಬಾದಾಮಿಯ ಅಭಿವೃದ್ಧಿ ಮಾಡೋಣ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.