
ರಬಕವಿ ಬನಹಟ್ಟಿ: ‘ಜೈನ ಧರ್ಮಿಯರು ಹಮ್ಮಿಕೊಳ್ಳುವ ಸಿದ್ಧಚಕ್ರ ಆರಾಧನೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸುವುದರಿಂದ ಜೀವನದಲ್ಲಿ ಆತ್ಮಶಾಂತಿ ಶಾಂತಿ ದೊರೆಯುತ್ತದೆ’ ಎಂದು ಇಲ್ಲಿಯ ಜೈನ ಧರ್ಮದ ಮುಖಂಡ ಸತೀಶ ಹಜಾರೆ ತಿಳಿಸಿದರು.
ನಗರದಲ್ಲಿ ಪುಷ್ಪದಂತ ತೀರ್ಥಕಂರ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ದ್ವಾದಶ ವರ್ಷದ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಂ. ಬಾಹುಬಲಿ ಉಪಾಧ್ಯೆ ಆಚಾರ್ಯ ಮಾತನಾಡಿ, ‘ಪ್ರತಿಯೊಬ್ಬರು ಪರಮಾತ್ಮನ ಚಿಂತನೆಯಲ್ಲಿ ತೊಡಗಿಕೊಳ್ಳುವುದರಿಂದ ಪರಮಾತ್ಮನ ಸಾನ್ನಿಧ್ಯವನ್ನು ಪಡೆದುಕೊಳ್ಳಬಹುದು’ ಎಂದರು.
ಸ್ಥಾನಿಕ ಪಂಡಿತರಾದ ಅಭಿನಂದನ ಬಾಹುಬಲಿ, ಪ್ರಸನ್ನ ಹಜಾರೆ, ಪ್ರವೀಣ ಹಜಾರೆ, ಪ್ರದೀಪ ಹಜಾರೆ, ಅಭಯ ಎಂಡೊಳ್ಳಿ, ಡಾ.ಅಭನಂದನ ಡೋರ್ಲೆ, ಅಜಿತ ಬಾಬಗೊಂಡ ಸೇರಿದಂತೆ ರಬಕವಿ, ಬನಹಟ್ಟಿ, ತೇರದಾಳ, ಹಳಿಂಗಳಿ, ಹನಗಂಡಿ, ತಮದಡ್ಡಿ, ಹಿಪ್ಪರಗಿ, ಆಸಂಗಿ ಗ್ರಾಮಗಳ ಜೈನ ಧರ್ಮಿಯರು ಇದ್ದರು.
ಧರ್ಮಸಭೆ: ನ.4 ರಂದು ಬೆಳಿಗ್ಗೆ 6 ಗಂಟೆಗೆ ಶಾಂತಿ ಹೋಮ, ನವಗ್ರಹ ಹೋಮ, ದಶಾಂಶ ಹೋಮ ನಡೆಯಲಿವೆ. ಮಧ್ಯಾಹ್ನ 3 ಕ್ಕೆ ಪ್ರವಚನ, ಧರ್ಮಸಭೆ, ಸತ್ಕಾರ, ಸಂಜೆ 4ಕ್ಕೆ 27 ಕುದರೆ, 6 ರಥಗಳಲ್ಲಿ ವಾದ್ಯ ಮೇಳಗಳೊಂದಿಗೆ ರಬಕವಿ ನಗರದ ಪ್ರಮುಖ ಬೀದಿಗಳಲ್ಲಿ ಧರ್ಮ ಪ್ರಭಾವನೆ ಮೆರವಣಿಗೆಯೊಂದಿಗೆ ಆರಾಧನಾ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.