ಬಾಗಲಕೋಟೆ: ಸಮಾಜ ಕುರಿತು ವೈದ್ಯರೊಬ್ಬರು ಹೊಂದಿದ ಆರೋಗ್ಯಪರ ಕಾಳಜಿಯು ಈ ಪುಸ್ತಕದಲ್ಲಿ ಅಕ್ಷರರೂಪ ತಾಳಿದೆ. ಪ್ರತಿಯೊಬ್ಬರಿಗೂ ವೈದ್ಯಕೀಯ ವಿಷಯವನ್ನು ಪುಸ್ತಕದಲ್ಲಿ ಸರಳವಾಗಿ ಪ್ರತಿಪಾದಿಸಿದ್ದಾರೆ ಎಂದು ಕನ್ನಡ ವೈದ್ಯ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಡಾ.ಕರವೀರಪ್ರಭು ಕ್ಯಾಲಕೊಂಡ ಹೇಳಿದರು.
ಬಿ.ವಿ.ವಿ ಸಂಘದ ಮಿನಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಈಶ್ವರ ಕಲಬುರ್ಗಿ ಅವರು ಬರೆದ ‘ಭೂಮಿ ಮತ್ತು ಪಾದ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನಡಿಗೆ ಆರೋಗ್ಯಕರ ಬದುಕಿಗೆ ಅತ್ಯುತ್ತಮ ವ್ಯಾಯಾಮ ಎಂದು ಪುಸ್ತಕದಲ್ಲಿ ಹೇಳಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿರುವವರು ಕನ್ನಡದಲ್ಲಿ ಬರೆಯುವುದು ಕಡಿಮೆ. ಕಲಬುರ್ಗಿ ಅತ್ಯುತ್ತಮ ಪುಸ್ತಕವನ್ನು ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿರುವರು. ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಅವರ ಈ ಸಾಧನೆ ಸ್ಫೂರ್ತಿಯಾಗಲಿ’ ಎಂದರು.
ಪುಸ್ತಕ ಬಿಡುಗಡೆ ಮಾಡಿದ ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ‘ಶಸ್ತ್ರಚಿಕಿತ್ಸಕರೊಬ್ಬರು ಪುಸ್ತಕ ಬರವಣಿಗೆಗೆ ಕೈಹಾಕಿದ್ದು ಅಚ್ಚರಿಯಾದರೂ ಅಭಿಮಾನದ ವಿಷಯ. ಸಂಘದ ವೈರಾಗ್ಯದ ಮಲ್ಲಣಾರ್ಯ ಪ್ರಕಾಶನದ ಮೂಲಕ ಇನ್ನು ಹಲವು ವೈದ್ಯಕೀಯ ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ ಮತ್ತು ಡಾ.ಈಶ್ವರ ಕಲಬುರ್ಗಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.