ADVERTISEMENT

ವೈದ್ಯರಿಲ್ಲದೇ ರೋಗಿಗಳ ಪರದಾಟ: ಎಸ್.ಕೆ ಗ್ರಾಮದ ಆರೋಗ್ಯ ಕೇಂದ್ರದ ದುಃಸ್ಥಿತಿ

ರಾಮಕೃಷ್ಣ ಕುಲಕರ್ಣಿ
Published 18 ಅಕ್ಟೋಬರ್ 2025, 4:06 IST
Last Updated 18 ಅಕ್ಟೋಬರ್ 2025, 4:06 IST
<div class="paragraphs"><p>ಕುಳಗೇರಿ ಕ್ರಾಸ್‌ ಸಮೀಪದ ಖಾನಾಪುರ ಎಸ್.ಕೆ. ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ</p></div>

ಕುಳಗೇರಿ ಕ್ರಾಸ್‌ ಸಮೀಪದ ಖಾನಾಪುರ ಎಸ್.ಕೆ. ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ

   

ಕುಳಗೇರಿ ಕ್ರಾಸ್:‌ ಕಳೆದ ಹದಿನೈದು ದಿನಗಳಿಂದ ಸಮೀಪದ ಖಾನಾಪುರ ಎಸ್.ಕೆ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೇ ಸುತ್ತಮುತ್ತಲಿನ 24ಕ್ಕೂ ಹೆಚ್ಚು ಗ್ರಾಮಗಳ ರೋಗಿಗಳು ಪರದಾಡುವ ಸ್ಥಿತಿ ಉಂಟಾಗಿದೆ. ಸಮಸ್ಯೆಯ ಬಗ್ಗೆ ಗಮನಹರಿಸದಿರುವ ಆರೋಗ್ಯಾಧಿಕಾರಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರ ಘಟನೆಯೂ ಎರಡು ದಿನಗಳ ಹಿಂದೆ ನಡೆದಿದೆ.

ಖಾನಾಪುರ ಎಸ್.ಕೆ ಗ್ರಾಮದ ಲಕ್ಷ್ಮಣ ಲೋಕಾಪುರ ಅವರ ಸಂಬಂಧಿ ಮಹಿಳಾ ರೋಗಿಯೊಬ್ಬರು ಆಟೊ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಾಗ ಆರೋಗ್ಯ ಕೇಂದ್ರದಲ್ಲಿ ಒಬ್ಬರೂ ಸಿಬ್ಬಂದಿ ಇರಲಿಲ್ಲ. ಇದು ರೋಗಿಗಳ ಹಾಗೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಇಲ್ಲದಿರುವ ವಿಷಯವನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರ ಗಮನಕ್ಕೆ ತಂದಾಗ, ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿ ಮಂಜುನಾಥ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು. ‘ಈಗಾಗಲೇ ವೈದ್ಯಕೀಯ ಪ್ರಶಿಕ್ಷಣಾರ್ಥಿ ಡಾ. ನಿಖಿಲ್‌ ಮಾಗಿ ವಾರದಲ್ಲಿ ಮೂರು ದಿನ ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಮಂಜುನಾಥ ತಿಳಿಸಿದರು.  ವಾರದಿಂದ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ. ಶೂಶ್ರೂಷಕಿಯರೇ ವೈದ್ಯರಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ಗ್ರಾಮಸ್ಥರು ದೂರಿದರು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶೀಘ್ರದಲ್ಲೇ ವೈದ್ಯರನ್ನು ನೇಮಕ ಮಾಡುವಂತೆ ಶಾಸಕ, ಜಿಲ್ಲಾ ವೈದ್ಯಾಧಿಕಾರಿಗೆ ಸೂಚಿಸಿದರು.

‘ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂರು ದಿನಗಳ ಹಿಂದೆ ದೊಡ್ಡಮ್ಮನನ್ನು ಕರೆದುಕೊಂಡು ಬಂದಿದ್ದೆ. ಇಲ್ಲಿ ಬಂದಾಗ ಆರೋಗ್ಯ ಕೇಂದ್ರದಲ್ಲಿ ಒಬ್ಬ ಸಿಬ್ಬಂದಿಯೂ ಇರಲಿಲ್ಲ. ಇಲ್ಲಿ ವೈದ್ಯರು ಇದ್ದಾರೋ– ಇಲ್ಲವೋ ಎಂಬುದನ್ನು ತಿಳಿಸುವವರೂ ಸಹ ಇರಲಿಲ್ಲ’ ಎಂದು  ಖಾನಾಪುರ ಎಸ್.ಕೆ. ಗ್ರಾಮಸ್ಥ ಲಕ್ಷ್ಮಣ ಲೋಕಾಪುರ ಆರೋಪಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 19 ಮಂದಿ ಸಿಬ್ಬಂದಿ ಇರಬೇಕಾಗಿತ್ತು. 13 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವು ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗಿದೆ. ಆದರೆ, ವೈದ್ಯಾಧಿಕಾರಿ ಹುದ್ದೆ ಖಾಲಿ ಇದೆ. ಆಯುಷ್‌ ವೈದ್ಯರ ಹುದ್ದೆ ನಾಲ್ಕು ವರ್ಷಗಳಿಂದ ಖಾಲಿ ಇದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಮನಗೌಡ ದ್ಯಾವನಗೌಡ್ರ ದೂರಿದರು.

ನೋಟಿಸ್‌ ಜಾರಿ

ಖಾನಾಪುರ ಎಸ್.ಕೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ವೈದ್ಯರು ಅನಧಿಕೃತವಾಗಿ ಗೈರು ಹಾಜರಾಗಿರುವುದು ಕಂಡು ಬಂದಿದ್ದು ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೆ ತರಲಾಗಿದೆ. ವೈದ್ಯಕೀಯ ಪ್ರಶಿಕ್ಷಣಾರ್ಥಿ ಡಾ. ನಿಖಿಲ್‌ ಮಾಗಿ ಅನಧಿಕೃತವಾಗಿ ಗೈರು ಹಾಜರಾಗಿರುವ ಬಗ್ಗೆ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಗೆ ಜಿಲ್ಲಾ ಆರೋಗ್ಯಾಧಿಕಾರಿ ಮಂಜುನಾಥ ನೋಟಿಸ್‌ ನೀಡಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಮಲ್ಲಿಕಾರ್ಜುನ ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.