
ಬಾಗಲಕೋಟೆ: ಸಜ್ಜಲಶ್ರೀ ನರ್ಸಿಂಗ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾಗಿರುವುದು ಅತ್ಯಂತ ಹೆಮ್ಮೆಯ ವಿಷಯ. ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಆರೋಗ್ಯವಂತರಾಗುವುದು ಅಗತ್ಯವಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.
ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಾಜ್ಯ ಮತ್ತು ವಲಯಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ. ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಕ್ರೀಡಾಸಕ್ತಿಗೆ ಅನುಕೂಲವಾಗಲಿ ಎಂದು ಸುಸಜ್ಜಿತ ಒಳಾಂಗಣ, ಹೊರಾಂಗಣ ಕ್ರೀಡಾಂಗಣ ಹಾಗೂ ಸ್ವಿಮ್ಮಿಂಗ್ಪೂಲ್ ನಿರ್ಮಿಸಲಾಗಿದೆ ಎಂದರು.
ಜಮಖಂಡಿಯ ಬಿಎಲ್ಡಿಇ ಆಯುರ್ವೇದ ಕಾಲೇಜು ಮತ್ತು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯ ಮತ್ತು ಏಕವಲಯ ಮಟ್ಟದ ಗುಡ್ಡಗಾಡು ಓಟದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಸತತ ಮೂರನೇ ಬಾರಿ ಚಾಂಪಿಯನ್ಶಿಪ್ ಪ್ರಶಸ್ತಿ ಪಡೆದಿರುವರು.
ವೈಯಕ್ತಿಕ ವಿಭಾಗದಲ್ಲಿ ಅಕ್ಷತಾ ಗುಡ್ಡಗಾಡು ಓಟ, 3 ಸಾವಿರ ಮೀಟರ ಸ್ಟೆಪಲ್ ಚೇಜ್ ಓಟ ಹಾಗೂ 10 ಸಾವಿರ ಮೀಟರ್ ಓಟ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ, ಮುಕ್ತಾಯಿ 10 ಸಾವಿರ ಮೀಟರ್ ಓಟದಲ್ಲಿ ದ್ವಿತೀಯ ಮತ್ತು 1500 ಮೀಟರ್ ಓಟದಲ್ಲಿ ತೃತೀಯ ಸ್ಥಾನ, ಮೇಘಾ 3 ಸಾವಿರ ಮೀಟರ್ ಸ್ಟೆಪಲ್ ಚೇಜ್ ಓಟದಲ್ಲಿ ನಾಲ್ಕನೇ ಸ್ಥಾನ ಪಡೆದಿರುವರು. ಕಲಬುರಗಿ ವಿಭಾಗ ಮಟ್ಟದ ಪುರುಷರ ಕಬಡ್ಡಿ ಕ್ರೀಡಾಕೂಟದಲ್ಲಿ ಕಾಲೇಜಿನ ವಿದ್ಯಾರ್ಥಿಗಳ ತಂಡಕ್ಕೆ ದ್ವಿತೀಯ ಸ್ಥಾನ ಲಭಿಸಿದೆ.
ಸಂಘದ ಗೌರವ ಕಾರ್ಯದರ್ಶಿಗಳಾದ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ನರ್ಸಿಂಗ್ ಕಾಲೇಜುಗಳ ಪ್ರಾಚಾರ್ಯರಾದ ಡಾ.ದಿಲೀಪ ನಾಟೆಕರ್, ಪ್ರೊ.ಜಯಶ್ರೀ ಇಟ್ಟಿ, ಡಾ.ಪ್ರವೀಣ ಪಾಟೀಲ, ಉಪನ್ಯಾಸಕರಾದ ಡಾ.ಎಲ್.ಜಿ.ಪಾಟೀಲ, ಡಾ.ಶ್ರೀಹರ್ಷ, ಡಾ.ಶ್ರೀಧರ ಪೂಜಾರ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ವಿಜಯಕುಮಾರ ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.