ಗುಳೇದಗುಡ್ಡ: ‘ಸುಭಿಕ್ಷುವಾಗಿದ್ದ ಕರ್ನಾಟಕದ ಆರ್ಥಿಕತೆಯನ್ನು, ಆರ್ಥಿಕ ತಜ್ಞ ಎಂದೇ ಬಿಂಬಿತವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಕೂಡಲೇ ಮಣ್ಣುಪಾಲು ಮಾಡಿದ್ದಾರೆ’ ಎಂದು ಮಾಜಿ ಸಚಿವ ಬಿ.ರಾಮುಲು ಹೇಳಿದರು.
ಅವರು ಸೋಮವಾರ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಿಕಾ ಪ್ರಕಟನೆ ನೀಡಿ, ‘ಭ್ರಷ್ಟಾಚಾರದಲ್ಲಿ ಕರ್ನಾಟಕವೇ ಅಗ್ರಗಣ್ಯ ಸ್ಥಾನ ಪಡೆದಿದೆ. ಅವೈಜ್ಞಾನಿಕ ಗ್ಯಾರಂಟಿಗಳಿಂದ ರಾಜ್ಯ ಆರ್ಥಿಕ ದಿವಾಳಿಯಾಗಲಿದೆ ಎಂಬ ಸತ್ಯವನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ತಮ್ಮ ಅಭಿಪ್ರಾಯವನ್ನು ಬಹಿರಂಗ ಪಡಿಸಿದ್ದರು’ ಎಂದು ಹೇಳಿದರು.
‘ಇದರ ಬೆನ್ನಲ್ಲಿಯೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್- ಹಣ ವಸೂಲಿ ಆಗಲಿ, ಆ ಮೇಲೆ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡ್ತೀವಿ ಎನ್ನುವ ಅಹಂಕಾರದ ಮಾತನ್ನು ಹೇಳುವ ಮೂಲಕ ರಾಜ್ಯದ ಆರ್ಥಿಕತೆ ಅಧಃಪತನದಲ್ಲಿರುವುದನ್ನು ಸ್ಪಷ್ಟಪಡಿಸಿದ್ದರು’ ಎಂದರು.
ಗೃಹ ಸಚಿವ ಜಿ.ಪರಮೇಶ್ವರ ಅವರೇ ಸಿದ್ದರಾಮಣ್ಣನವರ ಹತ್ತಿರ ಅಭಿವೃದ್ಧಿಗೆ ದುಡ್ಡು ಇಲ್ಲ ಅಭಿವೃದ್ಧಿಗೆ ಎಂದು ಹೇಳುವ ಮೂಲಕ ಕರ್ನಾಟಕ ರಾಜ್ಯದಲ್ಲಿ ಹಣ ಇಲ್ಲ, ರಾಜ್ಯದ ಬೊಕ್ಕಸ ಖಾಲಿ ಖಾಲಿಯಾಗಿರುವುದು ಸ್ಪಷ್ಟವಾಗಿದೆ ಎಂದುರ.
ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಕೋಟಿ ಕೋಟಿ ಹಣ ಸುರಿದು, ಅವೈಜ್ಞಾನಿಕ ಗ್ಯಾರಂಟಿಗಳು, ಬೃಹತ್ ಭ್ರಷ್ಟಾಚಾರ ರಾಜ್ಯದಲ್ಲಿ ತಾಂಡವಾಡುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ರಾಜ್ಯದ ಜನರಿಗೆ ಶಾಪವಾಗಿದೆ ಎಂದು ಹೇಳಿದರು.
ಮರಡಿ ಮಠದಲ್ಲಿನ ಅಮ್ಮನವರು ನಿಧನರಾದ ಹಿನ್ನಲೆಯಲ್ಲಿ ಶ್ರೀಮಠಕ್ಕೆ ತೆರಳಿ ಶ್ರೀಗಳನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರು.
ಮುಖಂಡರಾದ ಕಮಲು ಮಾಲಪಾಣಿ, ಮಧುಸೂಧನ ರಾಂಡದ, ಭುವನೇಶ ಪೂಜಾರ, ತಳವಾರ, ಬಾಲು ನಿರಂಜನ, ಶಿವು ಗೋತಗಿ, ಮಹೇಶ ಸೂಳಿಭಾವಿ, ಪ್ರಕಾಶ ರೋಜಿ, ಶಿವು ತುಪ್ಪದ, ತಿಮಣ್ಣ ಬಂಡಿವಡ್ಡರ, ಪ್ರಭು ಕಳ್ಳಿಗುಡ್ಡ, ಪ್ರವೀಣ ದೇವಗಿರಿಕರ, ಸುರೇಶ ಗೌಡರ, ರಮೇಶ ಗೌಡರ, ಕೃಷ್ಣಾ ಬೀಳಗಿ, ಸಾಗರ ಅಥಣಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.