ಬಾಗಲಕೋಟೆ: ‘ಜೂನ್ 30ಕ್ಕೆ ಸರ್ಕಾರ ನೀಡಿದ್ದ ಗಡುವು ಮುಗಿದರೂ ಇನ್ನೂ 36 ಕಾರ್ಖಾನೆಗಳು ಕಬ್ಬಿನ ಬಾಕಿ ಉಳಿಸಿಕೊಂಡಿವೆ. ಅವುಗಳಲ್ಲಿ ದಾಸ್ತಾನು ಇರುವ ಸಕ್ಕರೆ ಹರಾಜು ಹಾಕಿರೈತರಿಗೆ ಹಣ ನೀಡಲಾಗುವುದು. ಆ ನಿಟ್ಟಿನಲ್ಲಿ ಮಂಗಳವಾರ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದರು.
ರಾಜ್ಯದಲ್ಲಿ ಒಟ್ಟು 67 ಸಕ್ಕರೆ ಕಾರ್ಖಾನೆಗಳು 2018–19ನೇ ಸಾಲಿನ ಹಂಗಾಮಿನಲ್ಲಿ ಅರೆದ ಕಬ್ಬಿಗೆ ನ್ಯಾಯಯುತ ಹಾಗೂ ಲಾಭದಾಯಕ (ಎಫ್ಆರ್ಪಿ) ದರದ ಅಡಿ ಒಟ್ಟು ₹11948 ಕೋಟಿ ನೀಡಬೇಕಿತ್ತು. ಅದರಲ್ಲಿ ₹11,384 ಕೋಟಿ ಪಾವತಿಸಿವೆ. ಇನ್ನೂ ₹617 ಕೋಟಿ ಬಾಕಿ ಉಳಿಸಿಕೊಂಡಿವೆ. ಇದರಲ್ಲಿ 31 ಕಾರ್ಖಾನೆಗಳು ಶೇ 100ರಷ್ಟು ಬಾಕಿ ಪಾವತಿಸಿವೆ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಕೇಂದ್ರದಿಂದ ರಫ್ತು ಸಹಾಯಧನ (ಎಕ್ಸ್ಪೋರ್ಟ್ ಸಬ್ಸಿಡಿ) ಬರಬೇಕಿರುವುದರಿಂದ ಇನ್ನಷ್ಟು ಕಾಲಾವಕಾಶ ಕೊಡಿ ಎಂದು ಉಳಿದ ಕಾರ್ಖಾನೆಗಳ ಮಾಲೀಕರು ಕೇಳಿದ್ದಾರೆ. ಅದಕ್ಕೆ ಒಪ್ಪಿಕೊಳ್ಳುವ ಮಾತೇ ಇಲ್ಲ. ರೈತರ ಹಿತಾಸಕ್ತಿ ವಿಚಾರದಲ್ಲಿ ಸರ್ಕಾರ ಯಾವುದೇ ಮುಲಾಜಿಗೆ ಒಳಗಾಗುವುದಿಲ್ಲ. ಕಠಿಣ ನಿಲುವು ಅನಿವಾರ್ಯ’ ಎಂದು ಸ್ಪಷ್ಟಪಡಿಸಿದರು.
ಸಭೆ ಇಂದು: ‘ಕಬ್ಬಿನ ಕಟಾವು ಹಾಗೂ ಸಾಗಣೆ ವೆಚ್ಚ (ಎಚ್ ಅಂಡ್ ಟಿ) ಕಾರ್ಖಾನೆಯಿಂದ ಕಾರ್ಖಾನೆಗೆ ವ್ಯತ್ಯಾಸ ಇರುವ ಕಾರಣ ಅದರಲ್ಲಿ ಏಕರೂಪತೆ ತರಲು ಹಾಗೂ ರೈತರಿಗೆ ಕಬ್ಬಿನ ಬಿಲ್ ಪಾವತಿ ವಿಚಾರದಲ್ಲಿ ಪ್ರತಿ ವರ್ಷ ಆಗುತ್ತಿರುವ ವಿಳಂಬಕ್ಕೆ ಶಾಶ್ವತ ಪರಿಹಾರ ಹುಡುಕಲು ಜುಲೈ 3ರಂದು ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ಕರೆಯಲಾಗಿದೆ’ ಎಂದು ತಿಮ್ಮಾಪುರ ತಿಳಿಸಿದರು
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.