
ಬಾಗಲಕೋಟೆ: ‘ಕಾಶಿಯಲ್ಲಿದ್ದರೂ ನನ್ನ ಹೆಸರನ್ನು ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಟ್ರ್ಯಾಕ್ಟರ್ಗೆ ಬೆಂಕಿ ಹೆಚ್ಚಿದ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿದೆ’ ಎಂದು ರೈತ ಮುಖಂಡ ಗಂಗಾಧರ ಮೇಟಿ ಹೇಳಿದ್ದಾರೆ.
ಪ್ರಕರಣದ ಕುರಿತು ಹೇಳಿಕೆ ನೀಡಿರುವ ವಿಡಿಯೊ ಬಿಡುಗಡೆ ಮಾಡಿರುವ ಅವರು, ‘ಗಲಾಟೆ ನಡೆದ ದಿನ ನಾನು ಕಾಶಿ ವಿಶ್ವನಾಥನ ದೇವಸ್ಥಾನದಲ್ಲಿದ್ದೆ. ನನ್ನ ಹೆಸರು ಎಫ್ಐಆರ್ನಲ್ಲಿ ಇರುವುದನ್ನು ಸ್ನೇಹಿತರು ತಿಳಿಸಿದ್ದಾರೆ. ನವೆಂಬರ್ 8ರಿಂದ ಪ್ರವಾಸ ಆರಂಭಿಸಿದ್ದು, ಸದ್ಯಕ್ಕೆ ನವದೆಹಲಿಯ ಇಂಡಿಯಾ ಗೇಟ್ ಬಳಿ ಇದ್ದೇನೆ’ ಎಂದು ತಿಳಿಸಿದ್ಡಾರೆ.
‘ರೈತರು ಇಂತಹ ಕೃತ್ಯ ಮಾಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಆ ಬಗ್ಗೆ ತನಿಖೆಯಾಗಲಿ. ಉದ್ದೇಶಪೂರ್ವಕವಾಗಿ ಹೆಸರು ಸೇರಿಸಲಾಗಿದ್ದು, ಇದನ್ನು ಮರುಪರಿಶೀಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಪ್ರತ್ಯಕ್ಷವಾಗಿ ಘಟನ ಸ್ಥಳದಲ್ಲಿ ಇರದಿದ್ದರೂ, ಮೊಬೈಲ್ ಫೋನ್ ಮೂಲಕ ಪ್ರಚೋದಿಸಿರಬಹುದು. ಮೊಬೈಲ್ ಕರೆಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಘಟನೆಯಲ್ಲಿ ಅವರ ಪಾತ್ರ ಇರದಿದ್ದರೆ, ಹೆಸರು ಕೈಬಿಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.