ಅಮಾನತು
ಇಳಕಲ್: ಇಲ್ಲಿಯ ಅಲಂಪೂರಪೇಟೆಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕಿ ಅಮೀನಾ ಕೊಳೂರ ಅವರನ್ನು ಸಹೋದ್ಯೋಗಿ ಶಿಕ್ಷಕನಿಗೆ ಚಪ್ಪಲಿಯಿಂದ ಹೊಡೆದ ಪ್ರಕರಣ ಸೇರಿದಂತೆ ವಿವಿಧ ಕರ್ತವ್ಯ ಲೋಪ ಆರೋಪಗಳ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಜಿ.ಮಿರ್ಜಿ ಅಮಾನತು ಮಾಡಿದ್ದಾರೆ.
ಅಮೀನಾ ಕೋಳೂರ ಅವರು ಅದೇ ಶಾಲೆಯ ಶಿಕ್ಷಕ ಅಂದಾನಯ್ಯ ವಸ್ತ್ರದ ಅವರಿಗೆ ಚಪ್ಪಲಿಯಿಂದ ಹೊಡೆದು ಅವಮಾನಿಸಿದ್ದಾರೆ ಎಂದು ಆರೋಪಿಸಿ, ಅವರನ್ನು ಅಮಾನತು ಮಾಡುವಂತೆ ಜಂಗಮ ಸಮಾಜದ ಮುಖಂಡರು ಬಿಇಒ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ಮಾಡಿ, ಆಗ್ರಹಿಸಿದ್ದರು.
ಶಿಕ್ಷಣ ಸಂಯೋಜಕರ ಮೂಲಕ ವರದಿ ತರಿಸಿಕೊಂಡ ಬಿಇಒ ಜಾಸ್ಮೀನ್ ಕಿಲ್ಲೇದಾರ ಅವರು, ಅಮೀನಾ ಕೋಳೂರ ವಿರುದ್ಧ ಕ್ರಮಕ್ಕೆ ಡಿಡಿಪಿಐ ಅವರಿಗೆ ವರದಿ ಸಲ್ಲಿಸಿದ್ದರು.
‘ಅಮೀನಾ ಅವರು ಈ ಹಿಂದೆ ಪ್ರಭಾರ ಮುಖ್ಯ ಶಿಕ್ಷಕಿ ಆಗಿದ್ದಾಗ ಅಕ್ಷರ ದಾಸೋಹದ ಅನುದಾನ ವೆಚ್ಚದ ರಸೀದಿಗಳನ್ನು ಇಡದೇ ಇರುವುದು, ಆಹಾರ ಧಾನ್ಯಗಳ ಮಾರಾಟ ಹಾಗೂ ದುರ್ಬಳಕೆ ಆರೋಪ, ಶಾಲೆಯಲ್ಲಿ 8ನೇ ತರಗತಿಗೆ ದಾಖಲಾತಿ ಆಗದಂತೆ ಮಾಡಿ, ಶಾಲೆಯ ಅಭಿವೃದ್ಧಿಗೆ ತೊಂದರೆ ಮಾಡಿದ ಆರೋಪ, ಶಾಲಾ ದಾಖಲೆಗಳನ್ನು ನಿರ್ವಹಿಸದೇ ಇರುವುದು, ಇಲಾಖೆಯ ಅನುಮತಿ ಇಲ್ಲದೇ ಗಳಿಕೆ ರಜೆ ಅನುಭವಿಸಿರುವ ಆರೋಪ ಹಾಗೂ ಶಾಲೆಯ ಇತರ ಸಿಬ್ಭಂದಿ ಜತೆ ಜಗಳ ಮಾಡಿಕೊಂಡು ಶಾಲೆಯ ಶೈಕ್ಷಣಿಕ ವಾತಾವರಣ ಹಾಳು ಮಾಡಿದ ಆರೋಪ ಇದೆ’ ಎಂದು ಉಪನಿರ್ದೇಶಕರು ಅಮಾನತು ಆದೇಶದಲ್ಲಿ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.