ADVERTISEMENT

ಪಶು ಆಸ್ಪತ್ರೆ: ಅರ್ಧಕ್ಕೆ ನಿಂತ ಕಾಮಗಾರಿ , ಸಂಚಾರಕ್ಕೂ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 5:51 IST
Last Updated 20 ಫೆಬ್ರುವರಿ 2026, 5:51 IST
ತೇರದಾಳದಲ್ಲಿ ನಿಮರ್ಾಣ ಹಂತದಲ್ಲಿಯೇ ನಿಂತಿರುವ ಪಶು ಆಸ್ಪತ್ರೆ ಕಟ್ಟಡ.
ತೇರದಾಳದಲ್ಲಿ ನಿಮರ್ಾಣ ಹಂತದಲ್ಲಿಯೇ ನಿಂತಿರುವ ಪಶು ಆಸ್ಪತ್ರೆ ಕಟ್ಟಡ.   

ತೇರದಾಳ: ತೇರದಾಳದ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಪಶು ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣ ಹಲವು ದಿನಗಳಿಂದ ಸ್ಥಗಿತಗೊಂಡಿದ್ದು, ರಸ್ತೆ ಬದಿ ಬಿದ್ದಿರುವ ಕಟ್ಟಡದ ವಸ್ತುಗಳು ಹಾಳಾಗುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

2025ರ ಸೆ.15ರಂದು ಶಾಸಕ ಸಿದ್ದು ಸವದಿ ಹಾಗೂ ಅಂದಿನ ಪುರಸಭೆ ಅಧ್ಯಕ್ಷೆ ಶಿಲ್ಪಾ ರೋಡಕರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಅತ್ಯಂತ ವೇಗವಾಗಿ ಆರಂಭಗೊಂಡ ಕಾಮಗಾರಿ ಕಂಡು ಸಾರ್ವಜನಿಕರು ಚಕಿತರಾಗಿದ್ದರು. ಆ ವೇಗ ಉಳಿಯದೆ ಈಗ ಅದರತ್ತ ಕಾರ್ಮಿಕರು ಸುಳಿಯದೆ, ಬಿರುಕು ಬಿಡುವ ಹಂತ ತಲುಪಿದೆ. ಕಟ್ಟಡಕ್ಕೆ ಬಳಸಲು ತಂದಿರುವ ಕಬ್ಬಿಣ, ಮರಳು, ಜಲ್ಲಿ ಕಲ್ಲು ರಸ್ತೆ ಬದಿ ಬಿದ್ದು ಸಂಚಾರಕ್ಕೂ ಅಲ್ಲಿ ತೊಂದರೆಯನ್ನುಂಟು ಮಾಡುವ ಹಂತ ತಲುಪಿದೆ.

ಪಶು ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ₹ 50 ಲಕ್ಷ ಅನುದಾನ ನೀಡಿದೆ. ಆದರೆ ಆರಂಭದಲ್ಲೇ ಕಾಮಗಾರಿ ಕಳಪೆಯಾಗಿದೆ ಎಂದು ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಅಶೋಕ ಆಳಗೊಂಡ ಹಾಗೂ ಪುರಸಭೆ ಮಾಜಿ ಸದಸ್ಯ ಗೌತಮ ರೋಡಕರ ಆರೋಪಿಸಿದ್ದಾರೆ.

ADVERTISEMENT

ಕಾಮಗಾರಿಯನ್ನು ಪಡೆದುಕೊಂಡವರು ಬೇರೆ. ಕಾಮಗಾರಿ ಕೈಗೊಳ್ಳುವವರು ಬೇರೆ ಆಗಿದ್ದಾರೆ. ನೂತನ ಕಟ್ಟಡ ಜಾಗಕ್ಕಾಗಿ ಅನುದಾನಕ್ಕಾಗಿ ಸಾಕಷ್ಟು ಒತ್ತಡ ಹೇರಿ ಪಡೆದುಕೊಳ್ಳಲಾಗಿದೆ. ಆದರೆ ಕಟ್ಟಡವನ್ನು ಸರಿಯಾಗಿ ಮಾಡದೆ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಇಲಾಖೆ ಅಧಿಕಾರಿಗಳು ಕೂಡ ಬಗ್ಗೆ ಮೌನ ವಹಿಸಿರುವುದು ಸರಿಯಲ್ಲ. ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅರ್ಧಕ್ಕೆ ನಿಲ್ಲಿಸಿರುವ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು. ಇಲ್ಲದಿದ್ದರೆ ಗುತ್ತಿಗೆದಾರ ಹಾಗೂ ಇಲಾಖೆ ಅಧಿಕಾರಿಗಳು ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈತ್ತ ಅಧಿಕಾರಿಗಳು ಗುತ್ತಿಗೆದಾರರಿಗೆ ಸಂಪರ್ಕಿಸಿದರೆ ಇನ್ನೆರಡು ದಿನದಲ್ಲಿ ಕಾಮಗಾರಿ ಆರಂಭಿಸುವ ಭರವಸೆ ನೀಡುತ್ತಾರೆ. ಆದರೆ ಬಂದಿಲ್ಲ.  ಮೇಲಾಧಿಕಾರಿಗಳಿಗೆ ತಿಳಿಸಲಾಗಿದ್ದು, ಮುಂದಿನ ಕ್ರಮದ ದಾರಿ ಕಾಯುತ್ತಿರುವುದಾಗಿ ತಾಲ್ಲೂಕು ಪಶು ಆರೋಗ್ಯಾಧಿಕಾರಿ ಡಾ.ಬಸವರಾಜ ಗೌಡರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಗುತ್ತಿಗೆದಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಮೊಬೈಲ್ ಕರೆ ಕೂಡ ಸ್ವೀಕರಿಸುವುದು ಇಲ್ಲ.

ಮೇಲ್ದರ್ಜೆಗೇರಿದ ಆಸ್ಪತ್ರೆಗೆ ಸಮರ್ಪಕ ಸಿಬ್ಬಂದಿ ಇಲ್ಲದಿರುವುದು, ಮುಖ್ಯವಾಗಿ ಪಶು ವೈದ್ಯರಿಲ್ಲದಿರುವುದು ಬಹುದೊಡ್ಡ ಸಮಸ್ಯೆ ಇದೆ. ನೂತನ ತಾಲ್ಲೂಕಿನ ಆಸ್ಪತ್ರೆಯಲ್ಲಿ ಜಾನುವಾರುಗಳಿಗೆ ಸೂಕ್ತ ವೈದ್ಯಕೀಯ ಸೇವೆ ಸಿಗದಿರುವುದು ಜಾನುವಾರು ಸಾಕಾಣಿಕೆದಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕೆ ಸೂಕ್ತ ಪರಿಹಾರ ಇಲಾಖೆ, ಸರ್ಕಾರ ನೀಡುವುದೇ ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.