
ತೇರದಾಳ: ಪ್ರಾಚೀನ ಕಾಲದಲ್ಲಿ ಶಿಕ್ಷಣಕ್ಕೆ ಆಧ್ಯಾತ್ಮದ ಸ್ಪರ್ಶ ಇತ್ತು. ಆಗ ಅತ್ಯಂತ ಗುಣಮಟ್ಟದ, ಸಂಸ್ಕಾರಯುತ ಶಿಕ್ಷಣ ದೊರೆಯುತ್ತಿತ್ತು. ಈಗ ಅಂತಹ ಶಿಕ್ಷಣ ಮಠಮಾನ್ಯಗಳಿಂದ ನಡೆಯುವ ಶಾಲೆಗಳಲ್ಲಿ ಮಾತ್ರ ಕಾಣಬಹುದಾಗಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ನಿರ್ದೇಶಕ ಎಚ್.ವೈ. ಜರಾಳಿ ಹೇಳಿದರು.
ತಾಲ್ಲೂಕಿನ ಹಳಿಂಗಳಿಯ ಸದ್ಗುರು ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ 32ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭವಿಷ್ಯದಲ್ಲಿ ಮಕ್ಕಳು ಸತ್ಪ್ರಜೆಯಾಗಲಿ, ಸಮಾಜದ ಆಸ್ತಿಯಾಗಲಿ ಎಂಬ ಆಸೆ ಹೊಂದಿರುವ ಪಾಲಕರ ಸಂಖ್ಯೆ ಕಡಿಮೆಯಾಗುತ್ತಿದೆ, ಎಲ್ಲರೂ ಹೆಚ್ಚು ಅಂಕ ಗಳಿಸುವುದರ ಕಡೆಯೇ ಗಮನ ಹರಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಾಸಕ ಸಿದ್ದು ಸವದಿ ಮಾತನಾಡಿ, ಶಿಕ್ಷಣ ಸಂಸ್ಥೆಯನ್ನು ತೆರೆಯುವುದಕ್ಕಿಂತ ಅದನ್ನು ಮುನ್ನಡೆಸಿಕೊಂಡು ಹೋಗುವುದು ಮಹತ್ತಕಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಹಳಿಂಗಳಿ ಗ್ರಾಮದ ಶ್ರೀ ಶರಣಬಸವೇಶ್ವರ ಶಾಲೆ 31 ವಸಂತಗಳನ್ನು ಪೂರೈಸಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ದೇವಲ ದೇಸಾಯಿ, ಎಚ್.ವೈ. ಜರಾಳಿ ಹಾಗೂ ಡಾ.ಡಿ.ಎನ್ ಯಲ್ಲಟ್ಟಿ ಅವರನ್ನು ಶ್ರೀಗಳು ಸತ್ಕರಿಸಿದರು. 10 ಮತ್ತು 12ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸೌತ್ ಇಂಡಿಯಾ ಬಯೋಟೆಕ್ ಲಿಮಿಟೆಡ್ ವತಿಯಿಂದ ಚಕ್ರೇಶ್ವರಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಸಂಸ್ಥೆಯ ಸಂಸ್ಥಾಪಕರಾದ ಶಿವಾನಂದ ಶ್ರೀ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬಾಗೌಡ ಪಾಟೀಲ, ಪ್ರದೀಪ ನಂದೆಪ್ಪನವರ, ಬಿ.ಬಿ ವೆಂಕಟಾಪೂರ, ಜಿ.ಬಿ ಗನವಾಡಿ, ಜಿನ್ನಪ್ಪ ಚೌಗಲಾ, ಸೋಮನಿಂಗ ತೇಲಿ, ಬಿ.ಎನ್ ಗುರವ, ವಿಠ್ಠಲ ಬುಗಡಿ, ಧನಪಾಲ ಯಲ್ಲಟ್ಟಿ, ಮಾದವರಾವ ಪಾಟೀಲ, ಮೋಹನ ಕಾಂಬಳೆ, ರಘು ಪೂಜೇರಿ, ಶಿಕ್ಷಣ ಸಂಯೋಜಕ ಬಿ.ಎಮ್ ಹಳೇಮನಿ, ಸಿಆರ್ಪಿ ಮಹೇಶ ಸೊರಗಾಂವಿ ಸೇರಿದಂತೆ ಶಾಲಾ ಸುಧಾರಣಾ ಸಮಿತಿ ಸದಸ್ಯರು, ಶಾಲಾ ಶಿಕ್ಷಕರು, ಮಕ್ಕಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.