ಗುಳೇದಗುಡ್ಡ: ರಾಜ್ಯ ಸರ್ಕಾರದ ಯೋಜನೆಗಳಾದ ಶಕ್ತಿ, ಯುವನಿಧಿ, ಗೃಹಲಕ್ಷ್ಮಿ, ಗೃಹಜ್ಯೋತಿ ಮುಂತಾದ ಯೋಜನೆಗಳ ಫಲಾನುಭವಿಗಳ ಜಿಲ್ಲಾ ಮಟ್ಟದ ಸಮಾವೇಶಕ್ಕೆ ಜನರನ್ನು ಕರೆದೊಯ್ಯಲು ಪಟ್ಟಣದ ಬಸ್ ಘಟಕದಿಂದ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಬಸ್ ನೀಡಿದ್ದರಿಂದ ಬಸ್ ನಿಲ್ದಾಣದಲ್ಲಿ ವಿವಿಧೆಡೆ ಪ್ರಯಾಣಿಸಬೇಕಿದ್ದ ಪ್ರಯಾಣಿಕರು ಗುರುವಾರ ಪರದಾಡುವಂತಾಯಿತು.
ಗುಳೇದಗುಡ್ಡದಿಂದ ಗದಗ, ಹುಬ್ಬಳ್ಳಿ, ಬಾದಾಮಿ, ಬಾಗಲಕೋಟೆ, ಇಳಕಲ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರಯಾಣಿಕರಿಗೆ ತೊಂದರೆಯಾಯಿತು. ಪ್ರಯಾಣಿಕರಾದ ಪರಸಪ್ಪ ಸಂಗಮದ ಮಾತನಾಡಿ, ‘ಧಾರವಾಡ ವಿಶ್ವವಿದ್ಯಾಲಯಕ್ಕೆ ಪಿರಚ್ಡಿಗಾಗಿ ಅರ್ಜಿ ಸಲ್ಲಿಸಲು ಗುರುವಾರ ಕೊನೆಯ ದಿನಾಂಕವಿದೆ. ಬೆಳಿಗ್ಗೆ 7ಕ್ಕೆ ಬಸ್ ನಿಲ್ದಾಣಕ್ಕೆ ಬಂದಡೂ 10 ಗಂಟೆಯಾದರೂ ಬಸ್ ಇಲ್ಲ. ಬೇರೆ ಬಸ್ ವ್ಯವಸ್ಥೆ ಮಾಡಿಲ್ಲ’ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
‘ಪಟ್ಟಣದ ಘಟಕಗಳಲ್ಲಿ 50 ಬಸ್ಗಳು ಇವೆ ಅದರಲ್ಲಿ 20 ಬಸ್ಗಳನ್ನು ಸಮಾವೇಶಕ್ಕೆ ಕಳುಹಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು’ ಎಂದು ಕೆಎಸ್ಆರ್ಟಿಸಿ ಗುಳೇದಗುಡ್ಡ ಬಸ್ ಘಟಕದ ವ್ಯವಸ್ಥಾಪಕರಾದ ವಿದ್ಯಾ ನಾಯಕ್ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.