
ಬಾಗಲಕೋಟೆ: ಸದನದ ಒಳಗೆ ಮತ್ತು ಹೊರಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಭ್ರಷ್ಟಾಷಾರದ ಆರೋಪ ಮಾಡಿ, ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ವಿರೋಧ ಪಕ್ಷಗಳ ನಡೆ ಖಂಡಿಸಿ ಫೆ.2ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಬೃಹತ್ ರ್ಯಾಲಿ ನಡೆಸಲಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಫೀರಪ್ಪ ಮ್ಯಾಗೇರಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ತಿಮ್ಮಾಪುರ ವಿರುದ್ಧ ಕಾಣದ ಕೈಗಳು ಹುನ್ನಾರ ನಡೆಸಿವೆ. ಯಾರೋ ಅಧಿಕಾರ ಲಂಚ ಪಡೆದಿದ್ದಾರೆ ಎಂದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಇಲಾಖೆ ಸಚಿವರ ಯಾವುದೇ ಪಾತ್ರ ಇಲ್ಲವಾದರೂ ಅವರ ರಾಜೀನಾಮೆ ಆಗ್ರಹಿಸುತ್ತಿರುವುದು ಸರಿಯಲ್ಲ ಎಂದರು.
ತಿಮ್ಮಾಪುರ ಅವರು ಅಬಕಾರಿ ಸಚಿವರಾದ ಬಳಿಕ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತಂದಿದ್ದು, ಕೆಲ ವರ್ಷಗಳಿಂದ ಒಂದೇ ಕಡೆ ಇದ್ದ ಅಧಿಕಾರಿಗಳ ವರ್ಗಾವಣೆ ಮಾಡಿದ್ದಾರೆ. ಲೈಸನ್ಸ್ ಪಡೆಯಲು 18 ಟೇಬಲ್ಗಳಿಗೆ ಹೋಗಬೇಕಿದ್ದ ಅರ್ಜಿಯನ್ನು ನೇರವಾಗಿ ಅಬಕಾರಿ ಡಿಸಿಗೆ ಹೋಗುವಂತೆ ಮಾಡಿದ್ದಾರೆ. ಅಧಿಕಾರಿ ಭ್ರಷ್ಟಾಚಾರ ನಡೆಸಿದರೆ, ಸಚಿವರಿಗೆ ಏನು ಸಂಬಂಧ? ದಲಿತ ಸಚಿವರೊಬ್ಬರನ್ನು ರಾಜಕೀಯವಾಗಿ ಹತ್ತಿಕ್ಕುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಆರೋಪಿಸಿದರು.
ಸಚಿವ ಆರ್.ಬಿ. ತಿಮ್ಮಾಪುರ ಮಾತ್ರವಲ್ಲ, ದಲಿತ ಸಚಿವ ಜಿ. ಪರಮೇಶ್ವರ್ ಗೃಹ ಇಲಾಖೆ ನಿರ್ವಹಣೆಗೆ ಯೋಗ್ಯರಲ್ಲ ಎನ್ನುವುದು, ಸಚಿವ ಪ್ರಿಯಾಂಕ್ ಖರ್ಗೆ, ಮುನಿಯಪ್ಪ ಸೇರಿದಂತೆ ದಲಿತ ಸಚಿವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಸಚಿವ ತಿಮ್ಮಾಪುರ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಿರುವ ವ್ಯಕ್ತಿಯ ಹಿನ್ನಲೆ ಗಮನಿಸಿದರೆ ಎಲ್ಲವೂ ಗೊತ್ತಾಗುತ್ತದೆ. ಅವರ ವಿರುದ್ಧ ರೌಡಿಶೀಟರ್ ಇದೆ. ಅಂತವರು ಕೊಟ್ಟ ದೂರು ಆಧರಿಸಿ ಸಚಿವರ ರಾಜೀನಾಮೆ ಕೇಳುವುದು ಸರಿಯಲ್ಲ ಎಂದರು.
ಶಿವಾನಂದ ಮಾದರ, ನಾಗೇಶ ಕಾತರಕಿ, ರಮೇಶ ಗುಂಡನಪಲ್ಲಿ, ಮಲ್ಲು ಕಟ್ಟಿಮನಿ, ಶಿವಪ್ಪ ಮಾದರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.