ADVERTISEMENT

ಬಾಗಲಕೋಟೆ | ವಿಶ್ವವಿದ್ಯಾಲಯದ ಘಟಿಕೋತ್ಸವ: ಕೋಲಾರದ ಧರಣಿಗೆ 16 ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 14:05 IST
Last Updated 1 ಜುಲೈ 2023, 14:05 IST
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ 12ನೇ ಘಟಿಕೋತ್ಸವದಲ್ಲಿ ಬಿ.ಎಸ್ಸಿ ವಿಭಾಗದಲ್ಲಿ 16 ಚಿನ್ನದ ಪದಕಗಳನ್ನು ಪಡೆದ ಧರಣಿ ಎನ್‌. ಶೆಟ್ಟಿ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೊತ್‌ ಪದಕ ಪ್ರದಾನ ಮಾಡಿದರು.
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ 12ನೇ ಘಟಿಕೋತ್ಸವದಲ್ಲಿ ಬಿ.ಎಸ್ಸಿ ವಿಭಾಗದಲ್ಲಿ 16 ಚಿನ್ನದ ಪದಕಗಳನ್ನು ಪಡೆದ ಧರಣಿ ಎನ್‌. ಶೆಟ್ಟಿ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೊತ್‌ ಪದಕ ಪ್ರದಾನ ಮಾಡಿದರು.    

ಬಾಗಲಕೋಟೆ: ಕೋಲಾರ ತಾಲ್ಲೂಕಿನ ಸಗಟೂರಿನ ಬಿ.ಎಸ್ಸಿ ಪದವೀಧರೆ ಧರಣಿ ಎನ್.ಶೆಟ್ಟಿ ಅವರು ಇಲ್ಲಿ ಶನಿವಾರ ನಡೆದ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ 16 ಚಿನ್ನದ ಪದಕಗಳನ್ನು ಪಡೆದರು.

ಎಂ.ಎಸ್ಸಿ ಪದವಿಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ರಾಯಚೂರಿನ ಅನುಷಾ ಕುರುಬರ್‌  6 ಚಿನ್ನದ ಪದಕಗಳಿಗೆ ಭಾಜನರಾದರು.

ಬಿ.ಎಸ್ಸಿ ವಿಭಾಗದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ನಿಶ್ಚತ್ ಎನ್‌. 4 ಚಿನ್ನದ ಪದಕ, ಸಚಿನ್‌ ಮೊದಗಿ, ಸರಸ್ವತಿ ಆರ್, ಪ್ರಿಯಾಂಕಾ ಎಚ್‌.ಎಲ್‌, ತಲಾ 3 ಪದಕ, ಎಸ್.ಪಿ. ಶ್ರುತಿ, ಕುಣೆ ಲಾವಣ್ಯಾ, ಹೇಮಂತಗೌಡ, ಭುವನೇಶ್ವರಿ ಎಸ್‌.ಕೆ ತಲಾ 2, ಕಾವ್ಯಶ್ರೀ ಡಿ.ಸಿ, ವರ್ಷಾ ಲಿಂಗರಾಜ ಮೋಜಿ, ದಿವ್ಯಭಾರತಿ ಹೆಗಡೆ, ಸುಷ್ಮಾ ಎನ್‌, ಶೀತಲ್‌ ಬಿ.ಆರ್, ಮಂಜುನಾಥ ಎಂ, ಲಾವಣ್ಯ ವೈಎಸ್‌, ಅಮಲ್ ಕಿಶೋರ ತಲಾ 1 ಪದಕ ಪಡೆದರು.

ADVERTISEMENT

ಎಂ.ಎಸ್ಸಿ ವಿಭಾಗದಲ್ಲಿ ಅಜಿತ್‌ ಕುಮಾರ್‌ 3, ವಿದ್ಯಾ, ಸುಚಿತಾ ಎ, ಸ್ನೇಹಾ ಎಚ್‌ ತಲಾ 2, ಶಾಂತಾ, ದಿವಾಕರ ಸಿ.ಜಿ, ಧನುಜಾ ಜಿ.ಎಸ್‌, ಸಹನಾ ಜಿ.ಎಸ್‌ ತಲಾ 1 ಚಿನ್ನದ ಪದಕ ಪಡೆದರು. ಪಿಎಚ್‌.ಡಿ ವಿಭಾಗದಲ್ಲಿ ರುಚಿತಾ.ಟಿ ಅವರು 3 ಮತ್ತು ಜಮುನಾರಾಣಿ ಜಿ.ಎಸ್‌. 2 ಚಿನ್ನದ ಪದಕ ಭಾಜನರಾದರು.

ರಾಜ್ಯಪಾಲ ಥಾವರಚಂದ್ ಗೆಹಲೋತ್ ಪದಕಗಳನ್ನು ಪ್ರದಾನ ಮಾಡಿದರು.

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ 16 ಚಿನ್ನದ ಪದಕ ಪಡೆದ ಪುತ್ರಿ ಧರಣಿ ಎನ್‌ ಶೆಟ್ಟಿ ಅವರಿಗೆ ತಂದೆ ನಾಗೇಂದ್ರ ಮತ್ತು ತಾಯಿ ಸುಮಿತಾ ಮುತ್ತು ನೀಡಿ ಸಂಭ್ರಮಿಸಿದರು
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ 12ನೇ ಘಟಿಕೋತ್ಸವದಲ್ಲಿ ಎಂ.ಎಸ್ಸಿ ವಿಭಾಗದಲ್ಲಿ 6 ಚಿನ್ನದ ಪದಕಗಳನ್ನು ಪಡೆದ ಅನುಷಾ ಜೊತೆ ತಂದೆ ಅಮಯೋಗಿ ಮತ್ತು ತಾಯಿ ಸುರೇಖಾ ಇದ್ದಾರೆ

‘ಮೂರು ‘ಎಫ್‌’ ಕಾರಣ’ ‘16 ಚಿನ್ನದ ಪದಕಗಳನ್ನು ಗಳಿಸಲು ಫ್ಯಾಮಿಲಿ ಫ್ಯಾಕಲ್ಟಿ ಮತ್ತು ಫ್ರೆಂಡ್ಸ್ ಎಂಬ ‘3 ಎಫ್’ ಕಾರಣ. ಪದಕಗಳನ್ನು ತಂದೆ–ತಾಯಿಗೆ ಅರ್ಪಿಸುವೆ’ ಎಂದು ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ ತೋಟಗಾರಿಕಾ ಕಾಲೇಜಿನ ಬಿ.ಎಸ್ಸಿ ಪದವೀಧರೆ ಧರಣಿ ಎನ್‌. ಶೆಟ್ಟಿ ತಿಳಿಸಿದರು. ‘ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಸಾರ್ವಜನಿಕ ಸೇವೆ ಮಾಡುವ ಆಸೆಯಿದೆ. ಅದಕ್ಕೆ ಸಿದ್ಧತೆ ನಡೆಸಿದ್ದು ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದೇನೆ’ ಎಂದರು. ಕಿರಾಣಿ ಅಂಗಡಿ ನಡೆಸುವ ಧರಣಿ ತಂದೆ ನಾಗೇಂದ್ರ ಶೆಟ್ಟಿ ಮಾತನಾಡಿ ‘ಮಗಳ ಸಾಧನೆ ಖುಷಿ ತಂದಿದೆ. ಕೃಷಿ ಖರ್ಚು ಜಾಸ್ತಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆಗೆ ಮಗಳು ಸ್ಪಂದಿಸಲಿ’ ಎಂದರು.

‘ತಂದೆಯೇ ಸ್ಫೂರ್ತಿ’ ‘ತೋಟಗಾರಿಕಾ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ರೈತರ ಸೇವೆ ಮಾಡುತ್ತಿರುವ ತಂದೆಯೇ ನನಗೆ ಸ್ಫೂರ್ತಿ’ ಎಂದು ಎಂ.ಎಸ್ಸಿ ಪದವೀಧರೆ ಅನುಷಾ ಕುರುಬರ್‌ ತಿಳಿಸಿದರು. ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಹಣ್ಣು ವಿಜ್ಞಾನ ವಿಭಾಗದಲ್ಲಿ ಪಿಎಚ್‌.ಡಿ. ಅಧ್ಯಯನ ನಡೆಸಿರುವ ಅವರು‘ವಿಜ್ಞಾನಿಯಾಗಿ ಹೊಸ ತಳಿಗಳ ಸಂಶೋಧನೆ ಮತ್ತು ತಾಂತ್ರಿಕತೆ ಸುಧಾರಣೆ ಮೂಲಕ ರೈತರಿಗೆ ನೆರವಾಗುವ ಉದ್ದೇಶವಿದೆ’ ಎಂದರು. ‘ವಿಜಯಪುರ ಜಿಲ್ಲೆಯ ಅಥರ್ಗಾದಲ್ಲಿ ಹೊಲ ಇದ್ದು ನಿಂಬೆ ಬೆಳೆಯುತ್ತಿದ್ದೇವೆ. ಕೃಷಿ ಕ್ಷೇತ್ರದಲ್ಲೇ ಸಾಧನೆ ಮಾಡುವೆ’ ಎಂದರು. ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಅನುಷಾ ತಂದೆ ಅಮಯೋಗಿ ಕುರುಬರ್‌ ಮಾತನಾಡಿ ‘ತಂದೆಗಿಂತ ಮಗಳು ಉನ್ನತ ಸಾಧನೆ ಮಾಡಿದರೆ ಅದಕ್ಕಿಂತ ಖುಷಿ ಇನ್ನೇನಿದೆ. ವಿಜ್ಞಾನಿಯಾಗಿ ಅವಳು ರೈತರಿಗೆ ನೆರವಾಗುವ ಕೆಲಸ ಮಾಡುವಳು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.