ADVERTISEMENT

ಗುಳೇದಗುಡ್ಡ | ಉದ್ಘಾಟನೆಯಾಗದ ಇಂದಿರಾಗಾಂಧಿ ವಸತಿಶಾಲೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 5:17 IST
Last Updated 5 ಸೆಪ್ಟೆಂಬರ್ 2024, 5:17 IST
ಗುಳೇದಗುಡ್ಡ ಸಮೀಪದ ತೂಗುಣಸಿ ಗ್ರಾಮದ ಬಳಿ ನಿರ್ಮಾಣವಾಗಿರುವ ಇಂದಿರಾಗಾಂಧಿ ವಸತಿ ಶಾಲೆ
ಗುಳೇದಗುಡ್ಡ ಸಮೀಪದ ತೂಗುಣಸಿ ಗ್ರಾಮದ ಬಳಿ ನಿರ್ಮಾಣವಾಗಿರುವ ಇಂದಿರಾಗಾಂಧಿ ವಸತಿ ಶಾಲೆ   

ಗುಳೇದಗುಡ್ಡ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ತಾಲ್ಲೂಕಿನ ತೂಗುಣಸಿ ಗ್ರಾಮದ ಹತ್ತಿರ ಇಂದಿರಾಗಾಂಧಿ ವಸತಿ ಶಾಲೆಯ ಹೊಸ ಕಟ್ಟಡ ಪೂರ್ಣಗೊಂಡು ವರ್ಷ ಗತಿಸಿದರೂ ಉದ್ಘಾಟನೆಯ ಭಾಗ್ಯವಿಲ್ಲದಂತಾಗಿದೆ.

ಗುಳೇದಗುಡ್ಡ ಪಟ್ಟಣದಿಂದ 5 ಕಿ.ಮೀ ದೂರದಲ್ಲಿ ತೂಗುಣಸಿ ಗ್ರಾಮದ ಹತ್ತಿರ ಸ್ವಂಚ್ಛಂ ಪರಿಸರದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡದ ಸಮುಚ್ಚಯದಲ್ಲಿ ಪಾಠ ಮಾಡುವ ಶಿಕ್ಷಕರಿಗೆ, ಓದುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ಕಟ್ಟಡಗಳೂ ಸೇರಿ ಮೂಲ ಸೌಲಭ್ಯನ್ನೊಳಗೊಂಡ ಬೃಹತ್ ಕಟ್ಟಡ ನಿರ್ಮಾಣವಾಗಿದೆ. ಅಲ್ಲಿ ಎಲ್ಲ ಮೂಲ ಸಾಮಗ್ರಿಗಳು ವ್ಯವಸ್ಥೆ ಆಗಿದ್ದರೂ ಇದುವರೆಗೆ ಸ್ಥಳಾಂತರವಾಗಿಲ್ಲ. ಸಂಬಂಧಿಸಿದವರನ್ನು ವಿಚಾರಿಸಿದಾಗ ಆದಷ್ಟು ಬೇಗನೆ ಸ್ಥಳಾಂತರವಾಗುತ್ತದೆ ಎಂದು ಹೇಳುತ್ತಲೇ ಬಂದಿದ್ದಾರೆ.

ಪಟ್ಟಣದ ಖಾಸಗಿ ಕಟ್ಟಡದಲ್ಲಿ 2016-17 ನೇ ಸಾಲಿನಿಂದ ಇಂದಿರಾಂಧಿ ವಸತಿ ಶಾಲೆ ಆರಂಭವಾಗಿದೆ. ಇದುವರೆಗೆ ಒಟ್ಟು ಎಸ್.ಎಸ್.ಎಲ್.ಸಿ ಮೂರು ಬ್ಯಾಚ್ ವಿದ್ಯಾರ್ಥಿಗಳು ಉತ್ತಿರ್ಣರಾಗಿ ಹೊರ ಹೋಗಿದ್ದಾರೆ. ಪ್ರಸ್ತುತ ಒಟ್ಟು 240 ಕ್ಕೂ ಹೆಚ್ಚು ವಿದ್ಯಾರ್ಥಿಗಳು 6 ರಿಂದ 10 ನೇ ತರಗತಿಗಳಲ್ಲಿ ಓದುತ್ತಿದ್ದಾರೆ. ಒಟ್ಟು 19 ಸಿಬ್ಬಂದಿ ಕೆಲಸ ಮಾಡುತ್ತಿದ್ದು ಅದರಲ್ಲಿ 8  ಹೊರಗುತ್ತಿಗೆಯ ನೌಕರರು ಸೇರಿದ್ದಾರೆ. ಇಲ್ಲಿ ವಸತಿ ಶಾಲೆ ನಡೆಸುವುದಕ್ಕೆ ವಾರ್ಷಿಕ ₹ 22 ಲಕ್ಷಕ್ಕೂ ಅಧಿಕ ಬಾಡಿಗೆಯನ್ನು ಕಟ್ಟಲಾಗುತ್ತಿದೆ. ಆದರೆ ಆಟದ ಬಯಲು ಇರದೇ ಇರುವುದರಿಂದ ಪಠ್ಯೇತರ ಚಟುವಟಿಕೆಗಳಿಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಎಲ್ಲ ಸೌಲಭ್ಯ ಒಳಗೊಂಡಿರುವ ಕಟ್ಟಡಕ್ಕೇ ಶೀಘ್ರ ಸ್ಥಳಾಂತರವಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ADVERTISEMENT

‘ಕಟ್ಟಡ ಪೂರ್ಣಗೊಂಡರೂ ಇದುವರೆಗೆ ಸ್ಥಳಾಂತರಿಸಿಲ್ಲ. ಮಕ್ಕಳಿಗೆ ಎಲ್ಲ ಸೌಲಭ್ಯ ಇರುವುದರಿಂದ ಅದಷ್ಟು ಬೇಗನೇ ಹೊಸ ಕಟ್ಟಡದಲ್ಲಿ ಪಾಠಗಳು ನಡೆಯುವಂತಾಗಬೇಕು’ ಎಂದು ಹಾನಾಪುರ ಎಸ್.ಪಿ. ಗ್ರಾಮದ ಶ್ರೀನಿವಾಸ ನೆಲ್ಲೂರ ಒತ್ತಾಯಿಸಿದ್ದಾರೆ.

‘ಕಟ್ಟಡ ಮುಗಿದಿದ್ದು, ಕಟ್ಟಡದ ಮೂಲ ಸೌಲಭ್ಯ, ಇತರ ಸಾಮಗ್ರಿ ಮತ್ತು ಸಿಸಿಟಿವಿ ಅಳವಡಿಸುವುದು ಸೇರಿದಂತೆ ಎಲ್ಲ ಕೆಲಸ ಮುಗಿದಿದೆ. ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಾಮಗ್ರಿಗಳು ಬಂದಿವೆ. ಕೆಲವೇ ದಿನಗಳಲ್ಲಿ ಹಸ್ತಾಂತರಿಸುವುದಾಗಿ ಹೇಳಿದ್ದಾರೆ ಎಂದು ಇಂದಿರಾಗಾಂಧಿ ವಸತಿ ಶಾಲೆ ಪ್ರಾಚಾರ್ಯ ಆರ್.ಜೆ.ಪವಾರ ತಿಳಿಸಿದ್ದಾರೆ.

ಇಂದಿರಾಗಾಂಧಿ ವಸತಿ ನಿಲಯ ಕಟ್ಟಡ ನಿರ್ಮಾಣವಾಗಿದೆ. ಆದರೆ ಅದರ ಹಸ್ತಾಂತರ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಸಂಬಂಧಿಸಿದ ಪ್ರಾಚಾರ್ಯರಿಗೆ ಹಸ್ತಾಂತರ ಮಾಡಬೇಕಾಗುತ್ತದೆ. ಅದು ಯಾವ ಸ್ಥಿತಿಯಲ್ಲಿದೆ ಎನ್ನುವ ಮಾಹಿತಿ ಇಲ್ಲ. ಪಡೆದು ತಿಳಿಸುತ್ತೇನೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸದಾಶಿವ ಬಡಿಗೇರ ತಿಳಿಸಿದರು.

ಎಲ್ಲ ಕೆಲಸಗಳು ಮುಗಿದಿದ್ದು ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಕೆಲಸ ಬಾಕಿ ಇದೆ. ಅದನ್ನು ಈ ವಾರದಲ್ಲಿ ಪೂರ್ಣಗೊಳಿಸಿ 15 ದಿನಗಳಲ್ಲಿ ಪ್ರಾಚಾರ್ಯರಿಗೆ ಕಟ್ಟಡ ಹಸ್ತಾಂತರಿಸಲಾಗುವುದು.
ನಟರಾಜನ್, ಕಿರಿಯ ಎಂಜಿನಿಯರ್‌, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ
ಗುಳೇದಗುಡ್ಡ ಸಮೀಪದ ತೂಗುಣಸಿ ಗ್ರಾಮದ ಬಳಿ ನಿರ್ಮಾಣವಾಗಿರುವ ಇಂದಿರಾಗಾಂಧಿ ವಸತಿ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.