ಗುಳೇದಗುಡ್ಡ: ಶಿವಯೋಗಮಂದಿರದ ಕುಮಾರಶಿವಯೋಗಿಗಳು ತತ್ವ ಪ್ರಧಾನವಾಗಿ ಧರ್ಮ ಇರಬೇಕೆಂದಿದ್ದಾರೆ. ಆದರೆ, ವೀರಶೈವ ಲಿಂಗಾಯತರಲ್ಲಿ ಭಿನ್ನತೆ ತಂದು ಕೇವಲ ಲಿಂಗಾಯತ ಧರ್ಮದ ಹೆಸರಿನಲ್ಲಿ ಧರ್ಮ ಒಡೆಯುವ ಹುನ್ನಾರ, ಪಿತೂರಿಯನ್ನು ಕಾಣದ ಕೈಗಳು ಮಾಡುತ್ತಿವೆ ಎಂದು ಮುರುಘಾಮಠದ ಕಾಶಿನಾಥ ಶ್ರೀ ಆರೋಪಿಸಿದರು.
ಮುರುಘಾಮಠದಲ್ಲಿ ಭಾನುವಾರ ವೀರಶೈವ ಲಿಂಗಾಯತ ಧರ್ಮ ಒಕ್ಕೂಟ ವತಿಯಿಂದ ಹಮ್ಮಿಕೊಂಡಿದ್ದ ಸಭೆ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಇದು ಕಾಂಗ್ರೆಸ್ ಸರ್ಕಾರದ ಪಾಯೋಜಕತ್ವದಂತಿದೆ. ಸರ್ಕಾರವೇ ಮುಂದೆ ನಿಂತು ವೀರಶೈವ ಲಿಂಗಾಯತ ಧರ್ಮ ಒಡೆಯುವ ಷಡ್ಯಂತ್ರ ಮಾಡುತ್ತಿದೆ. ಅದಕ್ಕಾಗಿ ಸೆ.10 ರಂದು ಬಾಗಲಕೋಟೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ರಚಿಸಿಕೊಂಡು ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಆಭಿಯಾನಕ್ಕೆ ವೀರಶೈವ ಲಿಂಗಾಯತ ಧರ್ಮದವರು ಕಡ್ಡಾಯವಾಗಿ ಯಾರೂ ಹೋಗಬಾರದು ಎಂದು ಹೇಳಿದರು.
ವೀರಶೈವ ಎನ್ನುವ ಪದ ಬಳಸದೇ ಕೇವಲ ಲಿಂಗಾಯತ ಎಂಬ ಪದ ಬಳಸಿ ಎಲ್ಲರಲ್ಲಿ ಸಂಕುಚಿತ ಮನೋಭಾವನೆ ಮೂಡಿಸುವುದು ಸರಿಯಲ್ಲ. ಎಂದರು.
ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀ ಮಾತನಾಡಿ, ಬಸವಾದಿ ಪ್ರಮಥರ ಆಶಯಕ್ಕೆ ದಕ್ಕೆ ಬರದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದರು.
ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ವೀರಶೈವ, ಲಿಂಗಾಯತ ಬೇರೆಯಲ್ಲ. ಎಲ್ಲರೂ ಒಂದು ಎಂದು ಬಸವಣ್ಣನವರು ಎಲ್ಲ ಶ್ರಮ ವರ್ಗದವರನ್ನು ವೀರಶೈವ ಲಿಂಗಾಯತ ಧರ್ಮದಡಿ ತಂದಿದ್ದಾರೆ. ವೀರಶೈವ ಲಿಂಗಾಯತ ಎನ್ನುವ ಪದದಲ್ಲಿ ವಿಶಾಲವಾದ ಅರ್ಥವಿದೆ ಎಂದರು.
ಬಸವ ಸಂಸ್ಕೃತಿಗೆ ವಿರೋಧ ವ್ಯಕ್ತಪಡಿಸಿ, ಆ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಿಸಲಾಯಿತು.
ಜಂಗಮ ಸಮಾಜದ ಅಧ್ಯಕ್ಷ ಶಿವನಗೌಡ ಮಳಿಮಠ, ಮುಖಂಡರಾದ ಪ್ರಕಾಶ ಮುರಗೋಡ, ಮಹಾಂತೇಶ ಸರಗಣಾಚಾರಿ, ರವಿ ಅಂಗಡಿ, ಶ್ರೀಕಾಂತ ಹುನಗುಂದ ಸೇರಿದಂತೆ ವೀರಶೈವ ಲಿಂಗಾಯತ ಸಮಾಜಗಳ ವಿವಿಧ ಒಳ ಪಂಗಡಗಳ ಮುಖಂಡರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.