
ಬಾಗಲಕೋಟೆ: ಸಂಸಾರಿಕ ದು:ಖಗಳಿಂದ ಮುಕ್ತಿ ಪಡೆಯಬೇಕಾದರೆ ಸಂಸ್ಕಾರ ಅತ್ಯಂತ ಅಗತ್ಯವಾಗಿದೆ. ವೀರಶೈವ ಧರ್ಮದಲ್ಲಿ ಶಿವದೀಕ್ಷೆ ಮತ್ತು ಅಯ್ಯಾಚಾರ ಸಂಸ್ಕಾರಗಳು ಅತ್ಯಂತ ಮಹತ್ವ ಪೂರ್ಣವಾಗಿವೆ ಎಂದು ಬಿಲ್ ಕೆರೂರಿನ ಬಿಲ್ವಾಶ್ರಮದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮುಚಖಂಡಿಯ ವೀರಭದ್ರೇಶ್ವರ ಜೀರ್ಣೋದ್ಧಾರ ಸಮಿತಿ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಯ್ಯಾಚಾರ ಹಾಗೂ ಶಿವದೀಕ್ಷೆ ಸಮಾರಂಭದಲ್ಲಿ ವಟುಗಳಿಗೆ ಶಿವದೀಕ್ಷೆ ನೀಡಿ ಮಾತನಾಡಿದ ಅವರು, ಮನುಷ್ಯನು ತಾನು ಇರುವ ಸ್ಥಿತಿಗಿಂತಲೂ ಇನ್ನಷ್ಟು ಉನ್ನತವಾದ ಸ್ಥಿತಿಯನ್ನು ತಲುಪಲು ನೀಡುವ ಪ್ರಾಯೋಗಿಕ ಪ್ರೇರಣೆಯನ್ನೇ ಸಂಸ್ಕಾರ ಎಂದು ಕರೆಯುತ್ತಾರೆ ಎಂದರು.
ಜಗತ್ತಿನ ಎಲ್ಲ ಧರ್ಮದಲ್ಲಿಯೂ ಇಂತಹ ಹಲವಾರು ಸಂಸ್ಕಾರಗಳನ್ನು ಕಾಣಬಹುದು. ಮಂತ್ರ ಸಂಸ್ಕಾರದ ಮೂಲಕ ಶುದ್ದೀಕರಣಗೊಳಿಸಿ ಜ್ಞಾನೋಪದೇಶವನ್ನು ನೀಡಿ ಈ ಲಿಂಗವನ್ನು ನಿನ್ನ ಪ್ರಾಣಕ್ಕಿಂತ ಸಮಾನವಾಗಿ ಪ್ರೀತಿಸಿ ಎಂದು ವಿಶಿಷ್ಟ ಸಂಸ್ಕಾರವೇ ದೀಕ್ಷಾ ಸಂಸ್ಕಾರ ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಗುರುಬಸವ ಸೂಳಿಬಾವಿ ಮಾತನಾಡಿ, 40 ವರ್ಷಗಳಿಂದ ದೇವಸ್ಥಾನದಲ್ಲಿ ಜಂಗಮ ವಟುಗಳಿಗೆ ಅಯ್ಯಾಚಾರ, ಶಿವದೀಕ್ಷೆ ನೀಡುತ್ತಾ ಬರಲಾಗಿದೆ. ಈ ವರ್ಷವೂ ಕೂಡ 100ಕ್ಕೂ ಹೆಚ್ಚೂ ವಟುಗಳಿಗೆ ಅಯ್ಯಾಚಾರ ಶಿವದೀಕ್ಷೆ ನೀಡಲಾಗಿದೆ ಎಂದರು.
ಸಂಗಮೇಶ ಮಣ್ಣೂರ, ಪ್ರಧಾನ ಅರ್ಚಕ ಪ್ರಭುಸ್ವಾಮಿ ಸರಗಣಾಚಾರಿ, ಸಂಗಯ್ಯ ಸರಗಣಾಚಾರಿ ,ಗುರಯ್ಯ ಹಿರೇಮಠ ಶಾಸ್ತ್ರೀಗಳು, ಅಲ್ಲಯ್ಯ ಸರಗಣಾಚಾರಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.