ADVERTISEMENT

ವಿಜಯಾನಂದ ಕಾಶಪ್ಪನವರ ಹತ್ತಿಕ್ಕುವ ಕೆಲಸ ಸಲ್ಲ: ಜಯಮೃತ್ಯುಂಜಯ ಶ್ರೀ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 11:28 IST
Last Updated 20 ಡಿಸೆಂಬರ್ 2020, 11:28 IST
   

ಬಾಗಲಕೋಟೆ: ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ವಿಜಯಾನಂದ ಕಾಶಪ್ಪನವರ ವಿರುದ್ಧ ಇಳಕಲ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿರುವ ಹಿನ್ನೆಲೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಜನಪರ ಕಾಯ೯ಗಳ ಮಾಡಿಜನರಿಂದ ಸೈ ಎನಿಸಿಕೊಳ್ಳಿ. ಅದನ್ನು ಬಿಟ್ಟು ಅಧಿಕಾರ ಬಳಸಿ ಎದುರಾಳಿಯನ್ನು ಹತ್ತಿಕ್ಕುವುದು ಸರಿಯಲ್ಲ'ಎಂದು ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಅವರ ಹೆಸರು ಹೇಳದೇ ಶ್ರೀಗಳು ಟಾಂಗ್ ನೀಡಿದರು.

ಹೊಟ್ಟೆ ಕಿಚ್ಚಿನಿಂದ, ದ್ವೇಷದಿಂದ ಕಾಶಪ್ಪನವರ ಮತ್ತು ಅವರ ಹಿಂಬಾಲಕರನ್ನ ಹತ್ತಿಕ್ಕೋದು ಒಬ್ಬ ನಾಯಕನ ಗುಣವಲ್ಲ. ಅದು ಹುನಗುಂದ ತಾಲ್ಲೂಕಿನವರ ಗುಣವೂ ಅಲ್ಲ. ಇಲ್ಲಿನವರು ಯಾರೂ ದ್ವೇಷದ ರಾಜಕಾರಣ ಮಾಡಿಲ್ಲ. ಬಸವಾದಿ ಶರಣರನ್ನ ಕೊಟ್ಟ ನೆಲವಿದು. ಈ ನೆಲದಲ್ಲಿ ಹುಟ್ಟಿದ ರಾಜಕಾರಣಿಗಳು ಯಾರೂ ರಾಜಕೀಯ ಹುನ್ನಾರಗಳ ನಡೆಸಿ ಬೆಳೆದಿಲ್ಲ ಎಂದರು.

ADVERTISEMENT

ಇತ್ತೀಚಿನ ಕೆಲವು ಘಟನೆಗಳನ್ನು ನೋಡಿದರೆ ಇದು ನಮ್ಮ ತಾಲ್ಲೂಕಿಗೆ ಅಪಮಾನ ಮಾಡುವ ಸಂಗತಿಯಾಗಿದೆ. ಪೊಲೀಸರು ಸಾಮಾನ್ಯ ಜನರ ಹಿತ ಕಾಪಾಡುವ ಕೆಲಸ ಮಾಡಿದ್ದರೆ ಮಾಜಿ ಶಾಸಕರು ಠಾಣೆಗೆ ಏಕೆ ಬರುತ್ತಿದ್ದರು ಎಂದು ಪ್ರಶ್ನಿಸಿದರು.

'ನಿಮ್ಮ ಉದ್ದೇಶ ಕಾನೂನು ಪ್ರಕಾರವಾಗಿ ನಿರಪರಾದಿಗಳನ್ನ ಬಿಡುಗಡೆ ಮಾಡುವುದಾಗಿರಲಿಲ್ಲ. ಬದಲಿಗೆ ಉದ್ದೇಶಪೂರ್ವಕವಾಗಿ ಅಮಾಯಕರ ಮೇಲೆ ಮತ್ತಷ್ಟು ಕೇಸ್ ಹಾಕುವುದು ಆಗಿದೆ' ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯಾನಂದ ಕಾಶಪ್ಪನವರ ಶಕ್ತಿ ಎಂತಹದ್ದು ಅನ್ನೋದು ಇಡೀ ನಾಡಿಗೆ ಗೊತ್ತಿದೆ. ಕ್ಷುಲ್ಲಕ ರಾಜಕೀಯ ಮಾಡಿ ಅವರನ್ನು ಹತ್ತಿಕ್ಕುವ ಕೆಲಸ ಸಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.