ಬಾಗಲಕೋಟೆ: ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆ ಮುಂದುವರೆದಿರುವುದರಿಂದ ಜಿಲ್ಲೆಯಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ರಾಜಾಪುರ ಜಲಾಶಯದಿಂದ 1.63 ಲಕ್ಷ ಕ್ಯುಸೆಕ್, ದೂದ್ಗಂಗಾ ನದಿಯಿಂದ 30 ಸಾವಿರ ಕ್ಯುಸೆಕ್ ಸೇರಿ 1.93 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಯಲ್ಲಿ ಹರಿಯುತ್ತಿದೆ.
‘ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಸದ್ಯ 1.81 ಲಕ್ಷ ಕ್ಯುಸೆಕ್ ಇದ್ದು, ಈ ಪ್ರಮಾಣ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ 2.5 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿಯಬಿಡಲಾಗಿದೆ. ಆದರೆ ಕಳೆದ ವರ್ಷದಂತಹ ಮಹಾ ಪ್ರವಾಹದ ಪರಿಸ್ಥಿತಿ ಇಲ್ಲ’ ಎಂದು ಯುಕೆಪಿ ಅಧೀಕ್ಷಕ ಎಂಜಿನಿಯರ್ ಆರ್.ಪಿ.ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೆಳಗಾವಿ ಜಿಲ್ಲೆಯಲ್ಲಿ ಮಳೆ ಕಡಿಮೆ ಆಗಿರುವುದರಿಂದ ಕಳೆದ ಎರಡು ದಿನಗಳಿಂದ ಉಕ್ಕಿ ಹರಿಯುತ್ತಿದ್ದ ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಲ್ಲಿ ಅಪಾಯದ ಮಟ್ಟ ಇನ್ನು 48 ಗಂಟೆಗಳಲ್ಲಿ ಇಳಿಕೆಯಾಗುವ ಸೂಚನೆ ದೊರೆತಿದೆ. ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಸೋಮವಾರ ಬೆಳಿಗ್ಗೆ 26,864 ಕ್ಯುಸೆಕ್ ನೀರು ಹರಿಸಲಾಗಿತ್ತು. ಆ ಪ್ರಮಾಣ ಮಂಗಳವಾರ 21,964 ಕ್ಯುಸೆಕ್ಗೆ ಇಳಿಕೆಯಾಗಿತ್ತು.
ಘಟಪ್ರಭಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ 76 ಸಾವಿರ ಕ್ಯುಸೆಕ್ ಮುಂದುವರೆದಿದೆ. ಹಿಡಕಲ್ ಜಲಾಶಯದಿಂದ ನದಿಗೆ ನೀರು ಬಿಡುವ ಪ್ರಮಾಣ ಸೋಮವಾರ 40 ಸಾವಿರ ಕ್ಯುಸೆಕ್ ಇದ್ದರೆ ಮರುದಿನ ಅದು 33 ಸಾವಿರ ಕ್ಯುಸೆಕ್ಗೆ ಇಳಿಕೆಯಾಗಿದೆ. ಮಾರ್ಕಂಡೇಯ ನದಿ, ಹಿರಣ್ಯಕಶಿಪು ಹಾಗೂ ಬಳ್ಳಾರಿ ನಾಲಾದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.