ಜಮಖಂಡಿ: ಸಮೀಪದ ಕೃಷ್ಣಾ ನದಿಯ ಹಿಪ್ಪರಗಿ ಜಲಾಶಯದಲ್ಲಿ ನೀರಿದ್ದರೂ, ನಗರಸಭೆ ಅಧಿಕಾರಿಗಳು ಜಮಖಂಡಿ ನಗರಕ್ಕೆ ನಾಲ್ಕು ದಿನಕ್ಕೆ ಒಮ್ಮೆ ಮಾತ್ರ ನೀರು ಬಿಡುತ್ತಿದ್ದಾರೆ, ಇದರಿಂದ ನಗರದಲ್ಲಿ ನೀರಿನ ತೊಂದರೆಯಾಗುತ್ತಿದೆ.
ನಗರಕ್ಕೆ ಹೊಂದಿಕೊಂಡಿರುವ ಆಲಗೂರ, ಕಂಕಣವಾಡಿ ಆರ್.ಸಿಗಳಿಗೆ ನಿತ್ಯ ನೀರಿನ ತೊಂದರೆಯಾಗುತ್ತಿದೆ, ನದಿಯಿಂದ ಯಾವುದೇ ನೀರಿನ ಪೈಪ್ಲೈನ್ಗಳು ಇಲ್ಲ, ಇನ್ನೂ ಅಲ್ಲಿನ ಜನ ಕೊಳವೆಬಾವಿ ಅವಲಂಬಿಸಿದ್ದಾರೆ, ಬೇಸಿಗೆ ಇರುವುದರಿಂದ ಕೊಳವೆ ಬಾವಿಗೆ ನೀರು ಕಡಿಮೆಯಾಗಿ ಆರ್.ಸಿ ಕೇಂದ್ರಗಳಲ್ಲಿ ನೀರಿನ ಹಾಹಾಕಾರ ಪ್ರಾರಂಭವಾಗಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನಗರಕ್ಕೆ 2013 ರಲ್ಲಿ 24*7 ಕಾಮಗಾರಿ ಆರಂಭಿಸಲಾಗಿದ್ದು, ಇನ್ನೂ ಪೂರ್ಣವಾಗಿಲ್ಲ. ಎರಡು ಹಂತದ ಯೋಜನೆಗಳು ಪೂರ್ಣವಾದರು ಕೆಲ ಕಡೆಗಳಲ್ಲಿ ಅಪೂರ್ಣವಾದ ಪೈಪ್ಲೈನ್ ಮಾಡಿದ್ದು, ಕೆಲ ಕಡೆಗಳಲ್ಲಿ ಮಾಡಿರುವ ಪೈಪ್ಲೈನ್ ಕಿತ್ತು ಹೋಗಿವೆ,ಇದರಿಂದ ನಗರದ ಜನರಿಗೆ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿದೆ ಎಂಬುದು ನಗರದ ಜನರ ಆರೋಪವಾಗಿದೆ.
ಲಕ್ಕನಕೆರೆ ಹಾಗೂ ಕಟ್ಟೆಕೆರೆಯಲ್ಲಿ ನೀರು ಇರುವುದರಿಂದ ನಗರದಲ್ಲಿ ನೀರಿನ ತೊಂದರೆ ಉಂಟಾಗಿಲ್ಲ. ಕೆರೆಗಳಲ್ಲಿ ನೀರು ಇರುವುದರಿಂದ ಹಲವಾರು ಕೊಳವೆ ಬಾವಿಗಳಿಗೆ ಇನ್ನೂ ನೀರು ಕಡಿಮೆಯಾಗಿಲ್ಲ ಎನ್ನುತ್ತಾರೆ ನಗರದ ನಿವಾಸಿಗಳು.
ತಾಲ್ಲೂಕಿನ ಚಿಕ್ಕಪಡಸಲಗಿ ಶ್ರಮಬಿಂದು ಸಾಗರದಲ್ಲಿ ನೀರು ಖಾಲಿಯಾಗಿದ್ದು ನದಿ ಪಾತ್ರದ ಕಂಕಣವಾಡಿ, ಕಡಕೋಳ, ಮುತ್ತೂರ, ಮೈಗೂರ, ಶೂರ್ಪಾಲಿ, ತುಬಚಿ ಗ್ರಾಮಗಳಿಗೆ ನೀರಿನ ತೊಂದರೆಯಾಗುತ್ತಿದೆ. ಹಿಪ್ಪರಗಿ ಜಲಾಶಯದಲ್ಲಿ ಇನ್ನೂ ನೀರಿದ್ದು 0.25 ಟಿಎಂಸಿ ನೀರು ಬಿಡಬೇಕು ಎಂದು ಕಂಕಣವಾಡಿ ರೈತ ಈಶ್ವರ ಕರಬಸನವರ ತಿಳಿಸಿದರು.
ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ 401 ಜನವಸತಿ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಹಿಪ್ಪರಗಿ ಜಲಾಶಯದ ಹತ್ತಿರ ₹322 ಕೋಟಿ ವೆಚ್ಚದಲ್ಲಿ ಉನ್ನತ ತಂತ್ರಜ್ಞಾನ ಬಳಸಿಕೊಂಡು ನಿತ್ಯ 200 ಲಕ್ಷ ಲೀಟರ್ ನೀರು ಶುದ್ಧೀಕರಣವಾಗಿ ಸರಬರಾಜುವಾಗುವಂತಹ ಬೃಹತ ಯೋಜನೆಯ ಕಾಮಗಾರಿ ನಡೆಯುತ್ತಿದೆ, ಇದು ಪೂರ್ಣವಾದರೆ ತಾಲ್ಲೂಕಿನ ಯಾವ ಗ್ರಾಮಗಳಿಗೂ ನೀರಿನ ತೊಂದರೆಯಾಗುವುದಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಎಂಜಿನಿಯರ್ ಸುರೇಶ ಪಂಚಾಳ ತಿಳಿಸಿದರು.
Quote - ಕೃಷ್ಣಾ ನದಿಯಲ್ಲಿ ನೀರು ಇರುವುದರಿಂದ ನಗರಕ್ಕೆ ತೊಂದರೆಯಾಗಿಲ್ಲ ಜನರು ಮಿತವಾಗಿ ನೀರು. ಜನರ ಬಳಕೆಗೆ ತಕ್ಕಂತೆ ನೀರು ಬಿಡಲಾಗುತ್ತಿದೆ ಜ್ಯೋತಿಗಿರೀಶ ನಗರಸಭೆ ಪೌರಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.