ಗುಳೇದಗುಡ್ಡ: ಪ್ರಾಚೀನ ಪರಂಪರೆ ಹೊಂದಿರುವ ನೇಕಾರಿಕೆ ವೃತ್ತಿಯೊಂದಿಗೆ ತನ್ನ ಸಂಸ್ಕೃತಿಯನ್ನು ತಲೆಮಾರಿನಿಂದ ಪ್ರಸ್ತುತ ತಲೆಮಾರಿಗೆ ಬೆಳೆದುಕೊಂಡು ಬಂದಿದೆ ಎಂದು ಪ್ರೊ. ಚಂದ್ರಶೇಖರ ಹೆಗಡೆ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಜಿಲ್ಲಾ ಘಟಕ, ಬಾಗಲಕೋಟೆ, ತಾಲ್ಲೂಕು ಘಟಕ, ಗುಳೇದಗುಡ್ಡ ಆಶ್ರಯದಲ್ಲಿ ಸೋಮವಾರ ಕುರುಹಿನಶೆಟ್ಟಿ ಮಂಗಲ ಭವನದಲ್ಲಿ ಜರುಗಿದ ದಿ. ವೀರಪ್ಪ ಬನ್ನಿ ಇವರ ದತ್ತಿ ವಿಷಯ ‘ನೇಕಾರರ ಬದುಕಿನ ಸಾಂಸೃತಿಕ ನೆಲೆಗಳು’ ವಿಷಯದ ಕುರಿತು ಉಪನ್ಯಾಸ ನೀಡಿದರು.
ನಾಲ್ಕು ಸಾವಿರ ವರ್ಷಗಳ ಹಿಂದೆ ಮೆಸಪೋಟೋಮಿಯ ನಾಗರಿಕತೆಯಲ್ಲಿ ಕುರಿಗಳಿಂದ ಉಣ್ಣೆಯನ್ನು ಉತ್ಪಾದಿಸಿ ಉಣ್ಣೆ ಬಟ್ಟೆಯನ್ನು ತಯಾರಿಸುವ ಕಲೆ ಪ್ರಚಲಿತದಲ್ಲಿತ್ತು. ಸಿಂದೂ ನಾಗರಿಕತೆಯಲ್ಲಿಯೂ ಹತ್ತಿಯಿಂದ ಬಟ್ಟೆಯನ್ನು ತಯಾರಿಸಿದ ಅವಶೇಷಗಳಿವೆ ಆ ಕಾಲದಲ್ಲಿಯೇ ನೇಕಾರಿಕೆ ಉಗಮವಾದದ್ದು ಇತಿಹಾಸ ಎಂದರು.
ಕರ್ನಾಟಕದಲ್ಲಿ 66 ಲಕ್ಷ ಇರುವ ನೇಕಾರರು ಗುಳೇದಗುಡ್ಡ,ಇಳಕಲ್, ರಬಕವಿ-ಬನಹಟ್ಟಿ, ಗುಡೂರ, ಮಹಾಲಿಂಗಪೂರ, ಜಮಖಂಡಿ, ಕೆರೂರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವುದು ಇಲ್ಲಿನ ನೇಕಾರಿಕೆ ಸಂಸ್ಕೃತಿಯ ಹಿರಿಮೆಯನ್ನು ಹೇಳುತ್ತದೆ. ಗುಳೇದಗುಡ್ಡವೂಂದರಲ್ಲೆ ಹತ್ತು ಸಾವಿರ ಕೈಮಗ್ಗಗಳಿದ್ದವು ನಂತರ ಬಂಡವಾಳಶಾಹಿಗಳ ಹಿಡಿತಕ್ಕೆ ಸಿಕ್ಕು ನಲುಗಿ ನೇಕಾರಿಕೆ ಅಧ:ಪತನಕ್ಕಿಡಾಗಿ ಕೈಮಗ್ಗಗಳ ಜಾಗದಲ್ಲಿ ವಿದ್ಯುತ್ ಮಗ್ಗಗಳು ಬಂದಿವೆ. ನೇಕಾರರಿಗೆ ಉದ್ಯೊಗ ಇಲ್ಲದೆ ಬೇರೆ ಬೇರೆ ನಗರಗಳಿಗೆ ಉದ್ಯೊಗಕ್ಕಾಗಿ ವಲಸೆ ಹೋಗುತ್ತಿರುವುದು ವಿಪರ್ಯಾಸ ಎಂದು ಹೇಳಿದರು.
ದಿ. ಬಸವರಾಜ ಅಮರಣ್ಣ ಪಾಟೀಲರ ದತ್ತಿ ವಿಷಯ ರಂಗಭೂಮಿಯ ವೈಭವ ಕುರಿತು ಎಚ್.ಟಿ.ರಂಗಾಪೂರ ಮಾತನಾಡಿ, ಪ್ರೇಕ್ಷಕರ ಕೊರತೆ ಮತ್ತು ಹಣಕಾಸಿನ ಸಮಸ್ಸೆಯಿಂದ ನಾಟಕ ಕಂಪನಿಗಳು ಬಂದ್ ಆಗಿವೆ ಕಲಾವಿದರ ಬದುಕು ಅತಂತ್ರವಾಗಿದೆ ಎಂದು ಹೇಳಿದರು.
ಕಾರ್ಯಕ್ರವನ್ನು ಮಾಜಿ ಶಾಸಕ, ಹಿರಿಯ ಸಾಹಿತಿ ಮಲ್ಲಿಕಾರ್ಜುನ ಬನ್ನಿ ಉದ್ಘಾಟಿಸಿ ಮಾತನಾಡಿದರು. ಕುರುಹಿನಶೆಟ್ಟಿ ಯುವ ಕುಟುಂಬ ಹಾಗೂ ವಿವಿಧೊದ್ದೇಶಗಳ ಸಂಘದ ಉಪಾಧ್ಯಕ್ಷ ಸಂತೋಷ ನೇಮದಿ ಅಧ್ಯಕ್ಷತೆ ವಹಿಸಿದ್ದರು. ಗುರುಶಿದ್ದೇಶ್ವರ ಬೃಹನ್ಮಠದ ಗುರುಬಸವ ದೇವರು ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಕೋಶಾಧ್ಯಕ್ಷ ಪ್ರೊ. ಸಿ.ಎಂ.ಜೋಶಿ. ರಂಗ ಕಲಾವಿದೆ ಪ್ರೇಮಾ ಗುಳೇದಗುಡ್ಡ (ಪಾಟೀಲ), ರವಿ ಕಂಗಳ, ಸಂಗಮೇಶ ಚನ್ನಪ್ಪ ಚಿಕ್ಕಾಡಿ, ತಾಲ್ಲೂಕು ಕಸಾಪ ಅಧ್ಯಕ್ಷ ಡಾ.ಎಚ್.ಎಸ್. ಘಂಟಿ. ಕಸಾಪ ಪದಾಧಿಕಾರಿಗಳು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.